ಡಿಸಿಪಿ ಕೆ.ರಾಮರಾಜನ್ ತನಿಖಾ ವರದಿ ಕಸದ ಬುಟ್ಟಿಗೆ… !? ಗಾಂಜಾ ಮಾರಿದ ಪೊಲೀಸರ ರಕ್ಷಣೆಗೆ ನಿಂತವರಾರೂ…!?

ಹುಬ್ಬಳ್ಳಿ: ರಾಜ್ಯದ ಪೊಲೀಸರು ತಲೆತಗ್ಗಿಸುವಂತ ಕೃತ್ಯವೆಸಗಿದ್ದ ಪೊಲೀಸ್ ಇನ್ಸಪೆಕ್ಟರ್ ಸೇರಿ ಏಳು ಜನರನ್ನ ರಕ್ಷಣೆ ಮಾಡುವ ಉದ್ದೇಶದಿಂದಲೇ ದಕ್ಷ ಅಧಿಕಾರಿ ಡಿಸಿಪಿ ಕೆ.ರಾಮರಾಜನ್ ನೀಡಿದ್ದ ತನಿಖಾ ವರದಿಯನ್ನ ಕಸದ ಬುಟ್ಟಿಗೆ ಹಾಕಲಾಗಿದೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿವೆ.

ಎಪಿಎಂಸಿಯಲ್ಲಿ ಗಾಂಜಾ ತಂದು ಮಾರಾಟ ಮಾಡುವ ಸಮಯದಲ್ಲಿಯೇ ನಾಟಕದ ದಾಳಿ ಮಾಡಿ ಹಲವರನ್ನ ಬಂಧಿಸಿ, ಅವರಿಂದ ಹಣ ಪಡೆದು ಬಿಟ್ಟಿದ್ದ ಪ್ರಕರಣದಲ್ಲಿ ಡಿಸಿಪಿ ಕೆ.ರಾಮರಾಜನ್ ಅವರು, ಪೊಲೀಸ್ ಕಮೀಷನರ್ ಆದೇಶದಂತೆ ತನಿಖೆಯನ್ನ ಮಾಡಿ, ವರದಿಯನ್ನ ಪೊಲೀಸ್ ಕಮೀಷನರ್ ಲಾಬುರಾಮ್ ಅವರಿಗೆ ಒಪ್ಪಿಸಿದ್ದರು.
ವರದಿಯನ್ನ ಆಧರಿಸಿ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಎಪಿಎಂಸಿ ಪೊಲೀಸ್ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ಸೇರಿದಂತೆ ಎಪಿಎಂಸಿ ಹಾಗೂ ಗೋಕುಲ ಠಾಣೆಯ ಏಳು ಸಿಬ್ಬಂದಿಗಳನ್ನ ಅಮಾನತ್ತು ಮಾಡಲಾಗಿತ್ತು. ಆದರೆ, ಅದೇ ತನಿಖೆಯನ್ನ ಮತ್ತೆ ಧಾರವಾಡದ ಎಸಿಪಿ ಜೆ.ಅನುಷಾ ಅವರಿಗೆ ನೀಡಲಾಗಿತ್ತು.

ಗಾಂಜಾ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನ ಬಿಟ್ಟಿರುವುದು ಮತ್ತು ಗಾಂಜಾವನ್ನ ಮಾರಾಟ ಮಾಡಿರುವ ಅಥವಾ ಬಚ್ಚಿಟ್ಟಿರುವ ಬಗ್ಗೆಯೂ ತನಿಖೆಯನ್ನ ಡಿಸಿಪಿ ಕೆ.ರಾಮರಾಜನ್ ಸಂಪೂರ್ಣವಾದ ವಿವರವನ್ನ ಸಲ್ಲಿಕೆ ಮಾಡಿದ್ದರು.
ಘಟನೆ ನಡೆದು ತಿಂಗಳಾಗುತ್ತ ಬಂದರೂ ಗಾಂಜಾ ಎಲ್ಲಿದೆ ಎಂದು ಕಂಡು ಹಿಡಿಯಲು ಇನ್ನೂ ಆಗದೇ ಇರುವುದು ಹಾಗೂ ಪ್ರಕರಣದಲ್ಲಿದ್ದ ಪೊಲೀಸರನ್ನ ಬಂಧನ ಮಾಡದೇ ಇರುವುದಕ್ಕೆ ಹಲವರು ಸಂಶಯವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಯಾವ ಒತ್ತಡಕ್ಕೆ ಮಣಿದು ಆರೋಪಿ ಪೊಲೀಸರು ಉಳಿಸಲು ಪ್ರಯತ್ನ ಮಾಡುತ್ತಿದ್ದಾರೆಂಬುದು ಯಕ್ಷಪ್ರಶ್ನೆಯಾಗಿದೆ.
ಈ ಪ್ರಕರಣದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದ ಡಿಸಿಪಿ ಕೆ.ರಾಮರಾಜನ್ ಹೆಸರು ಕೆಡಿಸುವ ಯತ್ನ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಸಂಬಂಧಿಸಿದವರೇ ಉತ್ತರ ನೀಡಬೇಕಿದೆ.