”ಸತ್ತ ಸಮಾಜಕ್ಕೆ ಸಾಕ್ಷಿಯಾದ ರಸ್ತೆ ಗುಂಡಿ; ಬದುಕಿರುವ ಮಾನವೀಯತೆಗೆ ಸಾಕ್ಷಿಯಾದ ಧಾರವಾಡದ ಯುವಕ..!”
ಹುಬ್ಬಳ್ಳಿ: ನಗರದ ರಸ್ತೆಗಳು ಗುಂಡಿಮಯವಾಗಿ ಸವಾರರ ಪ್ರಾಣಕ್ಕೆ ಕಂಟಕವಾಗಿದ್ದರೂ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳ ನಡೆಗೆ ಬೇಸತ್ತ ಯುವಕನೋರ್ವ, ತಾನೇ ರಸ್ತೆಗಿಳಿದು ಗುಂಡಿ ಮುಚ್ಚುವ ಮೂಲಕ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾನೆ.
ಧಾರವಾಡದ ಮಣಕಿಲ್ಲಾ ನಿವಾಸಿ ಹಾಗೂ ಸಮಾಜ ಸೇವಕ ಮೊಜಿನ್ ಘೀ ವಾಲೆ, ಹುಬ್ಬಳ್ಳಿಯ ಉಣಕಲ್ ಹಾಗೂ ಬೈರಿದೇವರಕೊಪ್ಪದ ಪಿ.ಬಿ. ರಸ್ತೆಯಲ್ಲಿ ಬಿದ್ದಿದ್ದ ಅಪಾಯಕಾರಿ ಗುಂಡಿಗಳನ್ನು ಸ್ವತಃ ಮಣ್ಣು ಹಾಕಿ ಮುಚ್ಚಿದ್ದಾರೆ. ಈ ಭಾಗದಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಇದನ್ನು ಗಮನಿಸಿದ ಮೊಜಿನ್, ಸಾರ್ವಜನಿಕರ ಸುರಕ್ಷತೆಗಾಗಿ ತಾವೇ ಚೀಲದಲ್ಲಿ ಮಣ್ಣು ತಂದು ಗುಂಡಿಗಳನ್ನು ಬುಚ್ಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೋಟಿ ಕೋಟಿ ಅನುದಾನದ ನಡುವೆಯೂ ರಸ್ತೆ ಸರಿಪಡಿಸದ ಪಾಲಿಕೆಯ ಕಾಳಜಿಯನ್ನು ಈ ಯುವಕನ ಕಾರ್ಯ ಪ್ರಶ್ನಿಸುವಂತಿದೆ. ಯುವಕನ ಈ ಜನಪರ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
