ಹುಬ್ಬಳ್ಳಿ-ಧಾರವಾಡದ ಕೆಲ ಖಾಸಗಿ ಆಸ್ಪತ್ರೆಗಳಿಗಾದರೂ “ಅಂಕುಶ” ಹಾಕಬಹುದಾ… ಬಡವರ ಉಳಿವಿಗಾಗಿ…!!!
1 min readಹುಬ್ಬಳ್ಳಿ: ಬಡವರ ಬದುಕಿಗೆ ದೇಹದ ರೋಗಗಳು ಸಾಕಷ್ಟು ದುಬಾರಿಯಾಗುತ್ತಿದ್ದು, ಒಳ ಹೋದರೇ ಸಾಕು ಲಕ್ಷ ಲಕ್ಷ ಪೀಕುವ ವ್ಯವಸ್ಥೆ ಹುಬ್ಬಳ್ಳಿ ಧಾರವಾಡದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಹೆಮ್ಮರವಾಗುತ್ತ ಸಾಗಿದ್ದು, ಅಧಿಕಾರ ನಡೆಸುವ ರಾಜಕಾರಣಿಗಳು ಬಡವರ ಹೆಸರನ್ನ ಕೇವಲ ರಾಜಕಾರಣಕ್ಕೆ ಬಳಕೆ ಮಾಡಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ.
ಖಾಸಗಿ ಆಸ್ಪತ್ರೆಯೊಳಗೆ ಕಾಲಿಟ್ಟರೇ ಸಾಕು ದರಗಳ ಚಾರ್ಟ್ ಹಿಡಿದು ಪ್ಯಾಕೇಜ್ ಮಾತನಾಡಲಾಗತ್ತೆ. ಇದಕ್ಕೆ ಸಮಯವೇ ಇಲ್ಲವೆಂಬಂತೆ ಬಿಂಬಿಸಿ ಒಂದೇ ದಿನದ ಐಸಿಯು ಖರ್ಚು 20ರಿಂದ 40 ಸಾವಿರ ರೂಪಾಯಿ ತೆಗೆದುಕೊಳ್ಳಲಾಗತ್ತೆ.
ಬಡವರು, ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಗೆ ಹೋದರೇ ಸಾಲವನ್ನ ಪಡದೆ ಅಲ್ಲಿಂದ ಡಿಸ್ಜಾರ್ಜ್ ಮಾಡಿಕೊಳ್ಳುವ ಸ್ಥಿತಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಸಣ್ಣದೊಂದು ಜ್ವರ ಬಂದಿದೆ ಎಂದು ಹೋದ ರೋಗಿಗೆ ಎಲ್ಲ ಟೆಸ್ಟ್ಗಳನ್ನ ಮಾಡಿಸಿ, ಜತನದಿಂದ ಕೂಡಿಟ್ಟ ಹಣವನ್ನ ಖಾಲಿ ಮಾಡಲಾಗತ್ತೆ.
ಎಲ್ಲರಿಗೂ ಜೀವ ಮುಖ್ಯ. ಬಡವರಿಗೆ ಮತ್ತೂ ಮಧ್ಯಮ ವರ್ಗದವರಿಗೆ ಜೀವದ ಜೊತೆಗೆ ದೊಡ್ಡ ರೋಗಗಳು ಬಂದರೇ, ದೇವರೇ ಕಾಪಾಡಬೇಕು. ಖಾಸಗಿ ಆಸ್ಪತ್ರೆಗೆ ಕೇವಲ ಹಣ, ಹಣ ಮತ್ತೂ ಹಣ. ಹೆಣವಾದರೂ ಹಣ ಕೊಟ್ಟೆ ಹೊರಬರಬೇಕು.
ದಿನಬೆಳಗಾದರೇ, ಕಾಂಗ್ರೆಸ್ನವರು ಬಿಜೆಪಿಯವರ ಹಗರಣಗಳ ಬಗ್ಗೆ, ಬಿಜೆಪಿಯವರು ಕಾಂಗ್ರೆಸ್ನವರ ಹಗರಣಗಳ ಬಗ್ಗೆಯೂ ಮಾತನಾಡುತ್ತ ಹೋಗುವುದು ರೂಢಿಯಾಗಿದೆ. ದಿನಕ್ಕೊಂದು ಹೊರಬರುವ ಸೆಕ್ಸ್ ಸ್ಕ್ಯಾಂಡಲ್ಗಳ ಬಗ್ಗೆಯೂ ಫುಂಖಾನುಫುಂಖವಾಗಿ ಮಾತನಾಡುತ್ತಿದ್ದಾರೆಯೇ ಹೊರತೂ, ಬಡವರ ಮತ್ತೂ ಮಧ್ಯಮ ವರ್ಗದವರ ಜೀವನದ ನೋವಿಗೆ ಸ್ಪಂಧಿಸುವುದಕ್ಕೆ ಯಾರೂ ಮುಂದಾಗುತ್ತಿಲ್ಲ ಎಂಬುದು ನೊಂದವರ ಅಳಲಾಗಿದೆ.
ಸರಕಾರ ನಡೆಸುವ ಮಹನೀಯರು ಹಾಗೂ ಸರಕಾರದ ತಪ್ಪುಗಳ ಬಗ್ಗೆ ಮಾತನಾಡುವ ವಿರೋಧ ಪಕ್ಷದ ಮಹಾನುಭಾವರು, ದಯವಿಟ್ಟು ಹುಬ್ಬಳ್ಳಿ ಧಾರವಾಡದ ಖಾಸಗಿ ಆಸ್ಪತ್ರೆಗಳಲ್ಲಿ ಯಾವ ಯಾವ ರೇಟಿಗೆ ಏನೇನು ಚಿಕಿತ್ಸೆ ಮತ್ತು ಐಸಿಯುಗಳ ದರ ಪಟ್ಟಿಯನ್ನ ಪಡೆದುಕೊಂಡು ಒಂದ್ಸಲ ನೋಡಿ, ಸತ್ಯದ ದರ್ಶನವಾಗಬಹುದು.
ನಾವು ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಕೊಡಿಸ್ತಿವಲ್ಲಾ ಎಂದು ಆಡಳಿತ ನಡೆಸುವ ಮತ್ತು ಜನರ ಓಟಿನಿಂದ ಗೆದ್ದವರು ಒಂದೇ ಒಂದು ರೋಗಕ್ಕಾದರೂ ನಿಮ್ಮನ್ನಾಗಲಿ, ನಿಮ್ಮ ಕುಟುಂಬದ ಯಾವುದೇ ಸದಸ್ಯನಿಗೆ ಚಿಕಿತ್ಸೆ ಕೊಡಿಸಿದ ಉದಾಹರಣೆ ಇದ್ದಾವಾ…
ಸ್ವಲ್ಪ ಯೋಚಿಸಿ, ನಿಮಗೆ ಅಧಿಕಾರ ಕೊಡುವ ಜನರ ನೋವಿಗೆ ಸ್ಪಂಧಿಸಿ. ಉತ್ತಮ ವಾತಾವರಣ ಸಿಗದ ಹಿನ್ನೆಲೆಯಲ್ಲಿ ಸಂಕಷ್ಟದ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ದರಪಟ್ಟಿ ಮತ್ತಷ್ಟು ಸಂಕಟಕ್ಕೆ ಕಾರಣವಾಗುತ್ತಿದೆ.
ಈಗಲಾದರೂ, ಇಂತಹದೊಂದು ವಿಚಾರವನ್ನ ಅಧಿಕಾರ ಹೊಂದಿರುವ ಮತ್ತೂ ಅಧಿಕಾರಿಗಳನ್ನ ಕಣ್ಸಲ್ಲೆಯಲ್ಲೇ ಕೆಲಸ ಮಾಡಿಸಿಕೊಳ್ಳುವ ರಾಜಕಾರಣಿಗಳು ಮುಂದಾಗಬೇಕಿದೆ. ನೋವಿಗೆ ಸ್ಪಂಧಿಸಬೇಕಿದೆ.