ಹುಬ್ಬಳ್ಳಿಯಲ್ಲೊಂದು ಕರುಣಾಜನಕ ಘಟನೆ- ನರಳಿ ನರಳಿ ಪ್ರಾಣ ಬಿಟ್ಟ ವ್ಯಕ್ತಿ…!

ಹುಬ್ಬಳ್ಳಿ: ತನ್ನ ಅನಾರೋಗ್ಯದ ಚಿಕಿತ್ಸೆಗಾಗಿ ಬಂದಿದ್ದ ವ್ಯಕ್ತಿಯೋರ್ವ ಮರಳಿ ತನ್ನೂರಿಗೆ ಹೋಗಲಾರದ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಮುಂಭಾಗದ ಪುಟ್ ಪಾತ್ ಮೇಲೆ ಬಿದ್ದು ಪ್ರಾಣವನ್ನ ಕಳೆದುಕೊಂಡ ಘಟನೆ ನಡೆದಿದೆ.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮುಳಗುಂದ ಪಟ್ಟಣದ ಕಲಂದರಸಾಬ ಸಯ್ಯದ ಬಾಳೆ ಎಂಬ ವ್ಯಕ್ತಿಯೇ ಸಾವಿಗೀಡಾದ ದುರ್ದೈವಿಯಾಗಿದ್ದು, ಆಸ್ಪತ್ರೆಯಲ್ಲಿ ತೋರಿಸಿಕೊಂಡ ನಂತರ ತೆಗೆದುಕೊಂಡ ಔಷಧಗಳು ಚೀಲದಲ್ಲಿ ಪತ್ತೆಯಾಗಿವೆ.
ಹಳೇ ಬಸ್ ನಿಲ್ದಾಣ ರೇಣುಕಾ ರೆಸ್ಟೊಂರೆಂಟ್ ಮುಂಭಾಗವೇ ಬಿದ್ದಿರುವ ಕಲಂದರಸಾಬ ಅಲ್ಲೇ ಪ್ರಾಣವನ್ನ ಬಿಟ್ಟಿದ್ದಾರೆ. ಯಾವ ಕಾರಣಕ್ಕೆ ಹೀಗಾಗಿದೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ.

ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಶವದ ಗುರುತಿನ ಚೀಟಿ ಸೇರಿದಂತೆ ಹಲವು ವಸ್ತು, ಹಣವನ್ನ ಚೀಲದಲ್ಲಿ ಹಾಕಿಟ್ಟು, ಶವವನ್ನ ಕಿಮ್ಸನ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.
ಕಲಂದರಸಾಬ ಯಾವ ಕಾರಣಕ್ಕೆ ಹುಬ್ಬಳ್ಳಿಗೆ ಬಂದಿದ್ದನೆಂಬ ಮಾಹಿತಿಯನ್ನ ಪೊಲೀಸರು ಕಲೆ ಹಾಕುತ್ತಿದ್ದು, ಬಸ್ ನಿಲ್ದಾಣದ ಬಳಿ ಏಕೆ ಬಂದಿದ್ದನೆಂಬುದರ ಬಗ್ಗೆಯೂ ವಿವರವನ್ನ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ.