ಹುಬ್ಬಳ್ಳಿಯಲ್ಲಿ ಹೆಣ್ಣು ಮಕ್ಕಳನ್ನ ಥಳಿಸಿದ “ಗಂಡಗ್ಯಾಗಳ” ಬಂಧಿಸಿದ ಬೆಂಡಿಗೇರಿ ಠಾಣೆ ಪೊಲೀಸರು..!

ಹುಬ್ಬಳ್ಳಿ: ವೀರಾಪೂರ ಓಣಿಯ ಮೈಲಾರಲಿಂಗೇಶ್ವರ ಗುಡಿ ಹತ್ತಿರದ ಮನೆಯೊಂದರ ಬಳಿಯಿದ್ದ ಮಹಿಳೆಯರ ಸ್ವಂತ ತುಳಸಿ ಕಟ್ಟೆಯನ್ನ ಒಡೆದು ಹಾಕಿದ್ದನ್ನ ಪ್ರಶ್ನಿಸಿ, ಮಹಿಳೆಯರನ್ನೇ ಹಿಗ್ಗಾ-ಮುಗ್ಗಾ ಥಳಿಸಿದ ಪ್ರಕರಣ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರನ್ನ ಬೆಂಡಿಗೇರಿ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ.
ಮಂಜುಳಾ ಎನ್ನುವವರ ಮನೆಗಂಟಿಕೊಂಡ ತುಳಸಿಕಟ್ಟೆಯನ್ನ ತೆಗೆದ ಹಿನ್ನೆಲೆಯಲ್ಲಿ ಆರತಿ ಹಾಗೂ ಮಂಜುಳಾ ಎಂಬುವವರನ್ನ ಥಳಿಸಿ, ಅಸಹ್ಯವಾಗಿ ಮಾತನಾಡಿದ ಬಗ್ಗೆ ದೂರು ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳನ್ನ ಬಂಧನ ಮಾಡಲಾಗಿದೆ.
ಬಂಧಿತರನ್ನ ಕನ್ನಯ್ಯಾ, ಕಿರಣ ಹಾಗೂ ರಾಹುಲ ಎಂದು ಗುರುತಿಸಲಾಗಿದ್ದು, ಇನ್ನುಳಿದ ಹಲವರು ತಲೆಮರೆಸಿಕೊಂಡಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಮಹಿಳೆಯರಿಗೆ ಹುಬ್ಬಳ್ಳಿ ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಮೂವರ ವಿರುದ್ಧ ಕಾನೂನು ಕ್ರಮವನ್ನ ಪೊಲೀಸರು ತೆಗೆದುಕೊಂಡಿದ್ದಾರೆ.