ಗಾಂಜಾ ಕೇಸ್: ಅಮಾನತ್ತಾಯಿತು… ಎಲ್ಲಿ ಹೋಯಿತು ಗಾಂಜಾ.. ಮುಂದೇನು….!?

ಹುಬ್ಬಳ್ಳಿ: ಎಪಿಎಂಸಿ ಆವರಣದಲ್ಲಿ ಗಾಂಜಾ ಪ್ರಕರಣವನ್ನ ಮಾಹಿತಿದಾರನ ಮಾಹಿತಿ ಮೇರೆಗೆ ಭೇದಿಸಿದ್ದ ಪೊಲೀಸರು, ತದನಂತರ ಏನೂ ನಡೆದೇ ಇಲ್ಲವೇನೋ ಎಂದು ಕೈತೊಳೆದುಕೊಂಡು ಮೈಗೆಲ್ಲಾ ಅಂಟಿಸಿಕೊಂಡಿದ್ದ ಇನ್ಸಪೆಕ್ಟರ್ ಸೇರಿ 7 ಪೊಲೀಸರು ಸಸ್ಪೆಂಡ್ ಆಗಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ವಶಕ್ಕೆ ಪಡೆದಿದ್ದ ಗಾಂಜಾ ಎಲ್ಲಿ ಹೋಯಿತು ಎಂಬುದು ಮಾತ್ರ ಇನ್ನೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

ಭದ್ರಾಪುರ ಅಸ್ಪಾಕ್ ಜೋಡಳ್ಳಿಯ ಮುತ್ತು ಎಂಬಾತನಿಂದ ಖರೀದಿಸಿ ತಂದು ಅಮರಗೋಳದ ಅರ್ಜುನನಿಗೆ ಮಾರಾಟ ಮಾಡಿದ್ದ. ಇದನ್ನ ಭದ್ರಾಪುರದ ಅಸ್ಪಾಕನ ಗೆಳೆಯನೂ ಆಗಿದ್ದ ಪೊಲೀಸ್ ಮಾಹಿತಿದಾರ ಶಂಕರ, ಎಪಿಎಂಸಿ ಠಾಣೆಯ ನಾಗರಾಜ ಎಂಬ ಹೆಡ್ ಕಾನ್ಸ್ಟೇಬಲ್ ಗೆ ಮಾಹಿತಿಯನ್ನ ನೀಡಿದ್ದ. ಎಲ್ಲವೂ ಕಳ್ಳ-ಪೊಲೀಸರಾಟದಂತೆ ನಡೆದಿತ್ತು. ಆದರೆ, ಹಣದ ಹಪಾಹಪಿಯಲ್ಲಿದ್ದವರು ಇಡೀ ಕೇಸ್ ನ್ನೇ ಮುಚ್ಚಿ ಹಾಕಿದ್ದರು.
ಭದ್ರಾಪುರದ ಅಸ್ಪಾಕ್ ನನ್ನ ಬಿಡಿಸಲು ಗೋಕುಲ ಠಾಣೆಯ ಮಹದೇವ ಹೊನ್ನಪ್ಪನವರ ಎಂಬ “ಮಹಾನ್” ಸಿಬ್ಬಂದಿ ಎಂಟು ಸಾವಿರಕ್ಕೆ ಮಾತನಾಡಿ, ಹತ್ತು ಸಾವಿರ ಕೊಡಿಸಲು ಬಾಯಿ ಎಂದು ಗೋಕುಲ ಠಾಣೆಯ ದಿಲಶಾದ್ ಎಂಬ ಮಹಿಳಾ ಸಿಬ್ಬಂದಿಗೆ ಹೇಳಿದ್ದರು. ಆ ದಿಲಶಾದ್ ಬಾಯಿ, ಹತ್ತು ಸಾವಿರದ ಬದಲಾಗಿ ಮೂವತ್ತು ಸಾವಿರ ಕೊಡುವಂತೆ ಅಸ್ಪಾಕನಿಗೆ ಗಂಟು ಬಿದ್ದಿದ್ದಳು. ಆಗಲೇ ಈ ವೀಡಿಯೋ ಆಗಿತ್ತು.

ಈ ಘಟನೆಯನ್ನ ಕರ್ನಾಟಕವಾಯ್ಸ್.ಕಾಂನಲ್ಲಿ ನೋಡಿ ಸಮಗ್ರವಾಗಿ ತನಿಖೆ ನಡೆಸಿದ್ದ ದಕ್ಷ ಅಧಿಕಾರಿ ನೀಡಿದ ವರದಿಯನ್ನ ಆಧರಿಸಿ ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ಸೇರಿದಂತೆ ಏಳು ಜನರನ್ನ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದರು.
ಗೋಕುಲ ಠಾಣೆಯ ಹೊನ್ನಪ್ಪನವರ ಎಂಬ “ಮಹಾನ್” ಸಿಬ್ಬಂದಿಯ ಮಾತು ಕೇಳಿ ದಿಲಶಾದ್ ‘ಒಳ’ ಒಪ್ಪಂದದ ಬಗ್ಗೆ ದೂರು ನೀಡುವ ಷಢ್ಯಂತ್ರವನ್ನೂ ರೂಪಿಸಿದ್ದಳು. ಆದರೆ, ಇಂತಹ ನೀಚ ಮನೋಭಾವದವರನ್ನ ನೋಡಿರುವ ಹಿರಿಯ ಅಧಿಕಾರಿಗಳು ಚೆನ್ನಾಗಿಯೇ ತಪರಾಕಿ ಹಾಕಿ, ಅಮಾನತ್ತು ಮಾಡಿದ್ದರು.

ಇದೀಗ ತನಿಖೆಯು ಮುಂದುವರೆದಿದೆ. ಈಗಾಗಲೇ ಡಿಸಿಪಿ ಕೆ.ರಾಮರಾಜನ್ ಅವರ ಹತ್ತಿರ ಅಸ್ಪಾಕ್, ಶಂಕರ, ಅರ್ಜುನ ಸೇರಿದಂತೆ ಕರ್ನಾಟಕವಾಯ್ಸ್.ಕಾಂಗೆ ಮಾಹಿತಿಯನ್ನ ನೀಡಿದ ಹಲವರು ವೀಡಿಯೋ ಸಮೇತ ಹೇಳಿಕೆಯನ್ನ ನೀಡಿ ಬಂದಿದ್ದಾರೆ.

ಮುಂದುವರೆದ ತನಿಖೆಯನ್ನ ಎಸಿಪಿ ಜೆ.ಅನುಷಾ ಅವರು ನಡೆಸುತ್ತಿದ್ದು, ಇಲ್ಲಿ ಡಿಸಿಪಿಯವರ ಮುಂದೆ ನೀಡಿರುವ ಹೇಳಿಕೆಯನ್ನ ತಿರುಚಿಸಲು ಅಮಾನತ್ತಾಗಿರುವ ಕೆಲವು ಸಿಬ್ಬಂದಿಗಳು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದಕ್ಕೆ ಎಸಿಪಿ ಜೆ.ಅನುಷಾ ಅವರು ಸೊಪ್ಪು ಹಾಕುತ್ತಿಲ್ಲವೆಂದು ಗೊತ್ತಾಗಿದೆ. ಮೊದಲಿನ ಹೇಳಿಕೆ ಬದಲಾವಣೆ ಮಾಡಿದ್ರೇ, ಆರೋಪಿಗಳು ಒಳಗೆ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದೀಗ ಪ್ರಕರಣ ಕೊನೆಯ ಹಂತಕ್ಕೆ ಬಂದಿದ್ದು, ಗಾಂಜಾ ಮಾರಾಟ ಮಾಡಿದ ಸಿಬ್ಬಂದಿಗಳ ಬಂಧನವಾಗಲಿದೆ ಎಂದು ಹೇಳಲಾಗುತ್ತಿದೆ. ಆರೋಪ ಮುಚ್ಚಿ ಹಾಕುವುದಲ್ಲದೇ, ಎನ್ ಡಿಪಿಎಸ್ ಕಾಯ್ದೆಯಡಿ ಬಂಧನ ಮಾಡಲಾಗುವುದೆಂಬ ದಟ್ಟ ಮಾತುಗಳು ಕೇಳಿ ಬರುತ್ತಿವೆ.