ಬೆಂಗಳೂರಿಂದ ಬಂದ ಗಾಂಜಾ: ಮತ್ತೆರಡು ಪ್ರಕರಣ- ಏಳು ಜನರ ಬಂಧನ
1 min readವಿಜಯಪುರ: ರಾಜಧಾನಿ ಬೆಂಗಳೂರಿನಿಂದ ಗಾಂಜಾ ತಂದು ಗುಮ್ಮಟನಗರಿಯಲ್ಲಿ ಮಾರಾಟಕ್ಕೆ ಯತ್ನಿಸಿದ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಸಿಂದಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿಪಟ್ಟಣ ಆಹೇರಿ ಹತ್ತಿರದ ಎನ್.ಎಚ್ 50ರಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಸುರೇಶ ನಾಟೀಕಾರ, ಮಡಿವಾಳಪ್ಪ ಪರೀಟ್, ಬಾಬು ಲಾವಟೆ ಹಾಗೂ ಬೆಂಗಳೂರು ಮೂಲದ ಶರತ್, ಗಗನ್, ಎಸ್. ಮನೋಜ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 25 ಸಾವಿರ ಮೌಲ್ಯದ 2 ಕೆಜಿ 300 ಗ್ರಾಂ ಗಾಂಜಾ, ಒಂದು ಸ್ವಿಫ್ಟ್ ಕಾರ್, ಒಂದು ಬೈಕ್ ಪೊಲೀಸರ ವಶಕ್ಕೆ ಪೊಲೀಸರು ಪಡೆದಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೇ, ಮತ್ತೊಂದೆಡೆ ಹೊರ್ತಿ ಪೊಲೀಸ್ ಕಾರ್ಯಾಚರಣೆ ನಡೆಸಿ ವಿಜಯಪುರ ಜಿಲ್ಲೆಯ ಹೋರ್ತಿ ಹತ್ತಿರದ ದೇಗಿನಾಳ ಗ್ರಾಮದಲ್ಲಿ 750 ಗ್ರಾಂ ಗಾಂಜಾ ಜಪ್ತಿ ಮಾಡಿ, ಆರೋಪಿ ರೇವಣಸಿದ್ಧ ರಾಠೋಡ್ ಬಂಧಿಸಲಾಗಿದೆ. ಈ ಕುರಿತು ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.