ನಿಮ್ಮೊಳಗೊಬ್ಬ ‘ಗಣೇಶ’ ಇದ್ದಾನಾ… ಚತುರ್ಥಿ ಮಾಡಿದ್ರೆ ವಿಘ್ನ ನಿವಾರಕ ಸಂತುಷ್ಟಿಗೊಳ್ಳುತ್ತಾನಾ….!

ವರದಿ: ವಿನಯ ರೆಡ್ಡಿ, ಹಿರಿಯ ವರದಿಗಾರ
ಧಾರವಾಡ: ಇಂದು ಗಣೇಶ ಚತುರ್ಥಿ. ಪ್ರತಿಯೊಂದು ಮನೆಯಲ್ಲೂ ಸಡಗರ, ಸಂಭ್ರಮ. ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೆ ವಿಗ್ರಹವನ್ನ ತಂದಿಟ್ಟು, ಪೂಜೆ ಮಾಡಿದಾಗಲೇ ಸಮಾಧಾನ. ಇಂತಹ ವಿಘ್ನನಿವಾರಕನ ಮನೆಗೆ ತರುವ ನಾವೇಷ್ಟು ‘ಗಣೇಶ’ ಆಗಿದ್ದೇವೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕಿದೆ ಅಲ್ಲವೇ…!?

ಹೌದು.. ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರವನ್ನೇ ಮತ್ತೊಮ್ಮೆ ಮೆಲುಕು ಹಾಕುವ ಪ್ರಯತ್ನವನ್ನ ನಿಮ್ಮ ಕರ್ನಾಟಕವಾಯ್ಸ್.ಕಾಂ ಮಾಡುತ್ತಿದೆ. ಶಿವ-ಪಾರ್ವತಿ ಕೂಡಿಕೊಂಡು ತನ್ನಿಬ್ಬರು ಮಕ್ಕಳಾದ ಷಣ್ಮುಖ ಮತ್ತು ಗಣೇಶನಿಗೆ ಮೂರು ಲೋಕಗಳನ್ನ ಸುತ್ತಿ ಬರಲು ಹೇಳಿದಾಗ, ಷಣ್ಮುಖ ಲೋಕದ ಪರ್ಯಟನೆಗೆ ಹೊರಟರೇ ಗಣೇಶ ಮಾತ್ರ ತನ್ನ ತಂದೆ-ತಾಯಿಗಳನ್ನ ಸುತ್ತಿ ಪಾಲಕರಿಂದ ಶಹಬ್ಬಾಶ್ ಮಾಡಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ತನ್ನ ತಂದೆ-ತಾಯಿಯ ಸುತ್ತಲೂ ಲೋಕವಿದೆ ಎಂದು ಮಾರ್ಮಿಕವಾಗಿ ತಿಳಿಸಿಕೊಟ್ಟಿದ್ದು ಗಣೇಶನಲ್ಲವೇ.. ಆದರೆ..

ಇಂದಿನ ಯುವಕರ ಪಡೆ ಪಾಲಕರನ್ನ ನೋಡಿಕೊಳ್ಳುವ ರೀತಿ ಅದ್ಯಾವ ಮಟ್ಟಕ್ಕೆ ಹೋಗಿದೆ ನೋಡಿ. ತನ್ನ ಹುಟ್ಟಿಗೆ ಕಾರಣವಾಗಿ ಜಗತ್ತಿನ ಆಗು-ಹೋಗುಗಳನ್ನ ಪರಿಚಯಿಸುವ ತಂದೆ-ತಾಯಿಯನ್ನ ಮೂಲೆ ಗುಂಪು ಮಾಡುವ ಸಮಯ ಸಾಧಕರ ಸಂಖ್ಯೆ ಹೆಚ್ಚಾಗುತ್ತಿದೆ, ಅಲ್ಲವೇ.
ಮಕ್ಕಳೆನಿಸಿಕೊಂಡು ಕೆಲವು ಅತೃಪ್ತ ಆತ್ಮಗಳು ತಮ್ಮದೇ ಬದುಕು ಕಟ್ಟಿಕೊಳ್ಳಲು ಪಾಲಕರನ್ನೇ ದುರುಪಯೋಗ ಮಾಡಿಕೊಳ್ಳುವ ಮನಸ್ಥಿತಿಗಳು ಹೆಚ್ಚಾಗುತ್ತಿವೆ. ತಾನು ಬೆಳೆದು ತನ್ನದೇ ದುಡಿಮೆಯಿಂದ ಪಾಲಕರನ್ನ ನೋಡಿಕೊಳ್ಳಬೇಕೆಂದು ಬಯಸುವ ಮನಸ್ಸುಗಳೇ ಕಡಿಮೆಯಾಗಿವೆ. ಅಪ್ಪನ ಆಸ್ತಿಯನ್ನ ಮಾರಿಯಾದರೂ, ತಾವು ಬದುಕುಬೇಕೆಂಬ ಸೋಮಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಇದೀಗ ಮೂವತ್ತು, ನಾಲ್ವತ್ತು ವರ್ಷದ ಹಿಂದಿನ ಹಿರಿಯರು ತಮ್ಮ ಬದುಕು ಕಟ್ಟಿಕೊಳ್ಳಲು ಹೆಣಗಾಡಿದ್ದನ್ನ ನೋಡಿಕೊಂಡ ಮಕ್ಕಳು, ಅವರದ್ದೆ ಕಸುವಿನಲ್ಲಿ ಮಾಡಿದ ಆಸ್ತಿ ಉಣ್ಣಲು ಮುಂದಾಗುತ್ತಾರೆ ಹೊರತು, ಬೆಳೆಸಿದ ತಂದೆ-ತಾಯಿಯನ್ನ ಹೇಗೆ ಖುಷಿಯಿಂದ ಇರಿಸಬೇಕೆಂಬ ಕಲ್ಪನೆ ಕೂಡಾ ಇಲ್ಲವಾಗಿದೆ.
ಹಾಗಾಗಿಯೇ, ಪ್ರತಿಯೊಬ್ಬನ ಮನದಲ್ಲಿ ಗಣೇಶ ಪ್ರತಿಷ್ಠಾಪನೆ ಆಗಬೇಕಿದೆ. ನೀನು ಏನು ಅನ್ನುವುದಕ್ಕಿಂತ ತಂದೆ-ತಾಯಿ ಏನು ಎಂಬುದನ್ನ ಅರ್ಥ ಮಾಡಿಕೊಳ್ಳಬೇಕಿದೆ. ಆಗಲೇ ಇದಕ್ಕೊಂದು ಅರ್ಥ ಬರುವುದಲ್ಲವೇ..