ಸಿರಿಗೆರೆ ವನ್ಯಜೀವಿ ವಲಯದಲ್ಲಿ ಸಾಗುವಾನಿ ಮರ ಕಡಿತಲೆ- ತನಿಖೆಗೆ ಮಹಾಂತೇಶ ಅರಸ್ ಆಗ್ರಹ…

ಲಕ್ಷಾಂತರ ರೂ ಮೌಲ್ಯದ ಸಾಗುವಾನಿ ಮರ ಕಡಿತಲೆ : ತನಿಖೆಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹ
ಬೆಂಗಳೂರು: ಶಿವಮೊಗ್ಗ ತಾಲೂಕಿನ ಸಿರಿಗೆರೆ ವನ್ಯಜೀವಿ ವಲಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದು ಕಳ್ಳ ಸಾಗಾಟ ಮಾಡಿದ್ದು ಸೂಕ್ತ ತನಿಖೆ ಮಾಡಬೇಕೆಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್ ಆಗ್ರಹಿಸಿದ್ದಾರೆ.
ಸಿರಿಗೆರೆ ವನ್ಯಜೀವಿ ವಲಯದ ಮಲೇಶಂಕರಕ್ಕೆ ಹೋಗುವ ಅರಣ್ಯದಲ್ಲಿ ಅಕ್ರಮವಾಗಿ ಐದಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಕಡಿಯಲಾಗಿದೆ. ಈ ಮರಗಳ ಮೌಲ್ಯ ಲಕ್ಷಾಂತರ ರೂಪಾಯಿ ಆಗಿದ್ದು, ಈ ಅಕ್ರಮದಲ್ಲಿ ಸಿರಿಗೆರೆ ವನ್ಯಜೀವಿ ವಲಯದ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕಡಿತಲೆ ಮರಗಳ ಮೇಲೆ ಹಾಕಿರುವ ಚಾಪಾ(ಹ್ಯಾಮರ್)ಕ್ಕೂ, ಇಲಾಖೆಯಲ್ಲಿ ದಾಖಲೆಗೂ ವ್ಯತ್ಯಾಸ ಕಂಡುಬಂದಿದೆ. ಅಲ್ಲದೆ ಮರಗಳ ಅಕ್ರಮ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಿಗೆರೆ ವನ್ಯಜೀವಿ ವಲಯದಲ್ಲಿ ದಾಖಲಾಗಿರುವ ಪ್ರಕರಣಕ್ಕೂ ವ್ಯತ್ಯಾಸ ಕಂಡು ಬಂದಿದೆ ಎಂಬುವುದು ಮೂಲಗಳ ಮಾಹಿತಿ.
ಕೂಡಿ ಸೆಕ್ಷನ್ ಸರ್ವೆ ನಂಬರ್ 34,31 ಅರಣ್ಯ ಪ್ರದೇಶದಿಂದ ಕಳೆದ ಒಂದು ವರ್ಷದಲ್ಲಿ ಯೇಥೇಚ್ಚವಾಗಿ ಕಳ್ಳಸಾಗಾಟ ನಡೆದಿದೆ. ಮತ್ತು ಈ ಭಾಗದಲ್ಲಿ ಚೆಕ್ ಪೋಸ್ಟ್ ತಪಾಸಣೆ ಇಲ್ಲದ ಕಾರಣ ಯೇಥೇಚ್ಚವಾದ ಮರಮುಟ್ಟು ನಗರದ ಪಾಲಾಗುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಕೂಡಲೇ ತನಿಖೆ ನಡೆಸಬೇಕೆಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್, ಪ್ರಧಾನ ಕಾರ್ಯದರ್ಶಿ ಟಿ.ರುದ್ರಮುನಿ, ಕಾನೂನು ಸಲಹೆಗಾರರಾದ ಕೆ.ಹೆಚ್. ಶಿವಮೂರ್ತಿ ಆಗ್ರಹಿಸಿದ್ದಾರೆ.