“ನಾನೂ ಸ್ಟಾರ್ ಕ್ಯಾಂಪೇನರ್” ಪ್ರಚಾರಕ್ಕೆ ಹೋಗ್ತೇನಿ- ಶಾಸಕ ವಿನಯ ಕುಲಕರ್ಣಿ…
ಧಾರವಾಡ: ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಕುರಿತು ಕಿತ್ತೂರಿನಲ್ಲಿ ಶಾಸಕ ವಿನಯ ಕುಲಕರ್ಣಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
”ರಾಜ್ಯದ ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ನಾನು ಸಹ ಸ್ಟಾರ್ ಕ್ಯಾಂಪೇನರ್ ಆಗಿದ್ದು, ನಾಡಿದ್ದಿನಿಂದ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೇನೆ,” ಎಂದು ತಿಳಿಸಿದರು.
ದಾವಣಗೆರೆ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಮಾತನ್ನು ತಳ್ಳಿಹಾಕಿದ ಅವರು, “ದಾವಣಗೆರೆಯಲ್ಲಿ ಯಾವುದೇ ಅಸಮಾಧಾನವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಅಲ್ಲಿಯೂ ನಮ್ಮ ಪಕ್ಷವೇ ಗೆಲ್ಲಲಿದೆ,” ಎಂದು ಭರವಸೆ ವ್ಯಕ್ತಪಡಿಸಿದರು.
ಪದವೀಧರ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ನಲ್ಲಿ ಅಸಮಾಧಾನವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಸದ್ಯ ಕಾಂಗ್ರೆಸ್ನಲ್ಲಿ ಲಿಂಬಿಕಾಯಿ ಅವರು ಅತ್ಯಂತ ಸಕ್ರಿಯರಾಗಿದ್ದಾರೆ. ಅವರ ಸಕ್ರಿಯತೆ ಮತ್ತು ಕೆಲಸವನ್ನು ಪರಿಗಣಿಸಿ ಅವರಿಗೆ ಟಿಕೆಟ್ ನೀಡಿರುವುದು ಸರಿಯಾದ ಕ್ರಮವಾಗಿದೆ,” ಎಂದು ಸಮರ್ಥಿಸಿಕೊಂಡರು.
ಮುಂದಿನ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾದರೆ ತಮಗೂ ಅವಕಾಶ ನೀಡಬೇಕು ಎಂಬ ಇಚ್ಛೆಯನ್ನು ಕುಲಕರ್ಣಿ ಹೊರಹಾಕಿದರು. “ಹೈಕಮಾಂಡ್ ಮನಸ್ಸು ಮಾಡಿದರೆ ನಾನು ಸಹ ಸಚಿವನಾಗುತ್ತೇನೆ. ವರಿಷ್ಠರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡೋಣ. ನಮ್ಮ ನಾಯಕರು ಪಕ್ಷಕ್ಕಾಗಿ ಅಪಾರ ಶ್ರಮ ವಹಿಸಿದ್ದಾರೆ,” ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಸಿಎಂ ಬದಲಾವಣೆ ವಿಚಾರದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ,” ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.
