ಧಾರವಾಡ ಶಿಕ್ಷಣ ಇಲಾಖೆಯಲ್ಲಿ “ಶಿಕ್ಷಕ ಪ್ರಶಸ್ತಿ” ಫಿಕ್ಸಿಂಗ್: DDPI ಅವರೇ ಉತ್ತರ ಕೊಡಬಹುದಾ….!!??

ಧಾರವಾಡ: ಸೆಪ್ಟೆಂಬರ್ ಐದರಂದು ಅತ್ಯುತ್ತಮ ಶಿಕ್ಷಕರಿಗೆ ಕೊಡುವ ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನ ಮೊದಲೇ ಫಿಕ್ಸಿಂಗ್ ಮಾಡಲಾಗುತ್ತಿದ್ದು, ಅದಕ್ಕೆ ಪ್ರಮುಖ ಅಧಿಕಾರಿಗಳೆ ಕಾರಣ ಎಂದು ನಿಜವಾದ ಉತ್ತಮ ಶಿಕ್ಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪ್ರಶಸ್ತಿ ಆಯ್ಕೆ ಮಾಡಲು ಇರುವ ಮಾನದಂಡಗಳನ್ನ ಗಾಳಿಗೆ ತೂರಿ ತಮ್ಮ ಖುರ್ಚಿಗೆ ತೊಂದರೆಯಾಗದಂತೆ “ಯಾರ್ ಏನ್ ಹೇಳ್ತಾರ್” ಅದನ್ನ ಮಾಡೋಕೆ ಶಿಕ್ಷಣ ಇಲಾಖೆಯ ಶಾಣಪ್ಪಗಳು ಮುಂದಾಗಿದ್ದಾರೆಂದು ದೂರಲಾಗಿದೆ.
ಹಗಲಿರುಳು ಶಾಲೆ ಹಾಗೂ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಶ್ರಮಿಸುವ ಶಿಕ್ಷಕರನ್ನ ಮರೆತು, ಸರಿಯಾಗಿ ಶಾಲೆಗೆ ಹೋಗದ, ಸಂಘದ ಹೆಸರಿನಲ್ಲಿ ಮಕ್ಕಳಿಗೆ ಕಲಿಸದವರನ್ನ ‘ಒತ್ತಡದ’ ನೆಪ ಹೇಳಿ ಆಯ್ಕೆ ಮಾಡಲು ಮುಂದಾಗಿರುವುದು ಅಸಹ್ಯ.
ಮನಃಸಾಕ್ಷಿಯನ್ನ ಮರೆತು ನಿಷ್ಠಾವಂತ ಶಿಕ್ಷಕರ ಮನಸ್ಸಿಗೆ ನೋವನ್ನುಂಟು ಮಾಡುವ ವಿಧಾನ ಬೇಕಾ. ಆಯ್ಕೆಯಾದವರ ಮತ್ತು ಆಯ್ಕೆಗೆ ಕಳಿಸದ ಪ್ರೋಪೈಲ್ಗಳನ್ನ ಮುಂದೊಂದು ದಿನ ಬಹಿರಂಗ ಮಾಡುವ ಸ್ಥಿತಿ ಬಂದರೇ, ಆಗ ಸಂಬಂಧಿಸಿದ ಅಧಿಕಾರಿಯ “ಭಂಡ”ವಾಳ ಹೊರಗೆ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ.