ದುಮ್ಮವಾಡದ ‘ಸರ್ಕಲ್ ರಾಘವೇಂದ್ರ’ ಎಸಿಬಿ ಬಲೆಗೆ
ಧಾರವಾಡ: ಕಳೆದ ಆಗಷ್ಟ ತಿಂಗಳಲ್ಲಿ ಸುರಿದ ಮಳೆಗೆ ಹಾನಿಗೊಳಗಾದ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಮನೆಯೊಂದಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರಕ್ಕೆ ಶಿಫಾರಸ್ಸು ಮಾಡಲು 20 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ದುಮ್ಮವಾಡದ ಕಂದಾಯ ನಿರೀಕ್ಷಕ ರಾಘವೇಂದ್ರ ಬೊಮ್ಮನಾಳ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಮಿಶ್ರಿಕೋಟಿ ಗ್ರಾಮದ ಅಶೋಕ ಗಂಗಪ್ಪ ಕಾಶಿಬಡಿಗೇರ ಎಂಬುವವರ ಮನೆಯು ಕಳೆದ ಆಗಸ್ಟ ತಿಂಗಳಲ್ಲಿ ಸುರಿದ ಮಳೆಗೆ ಹಾನಿಗೀಡಾಗಿತ್ತು. ಸರಕಾರ ನೀಡುವ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಅರ್ಜಿ ಸಲ್ಲಿಸಿದ್ದರು. ಪರಿಹಾರಕ್ಕೆ ಶಿಫಾರಸು ಮಾಡಲು ದುಮ್ಮವಾಡದ ಕಂದಾಯ ನಿರೀಕ್ಷಕ ರಾಘವೇಂದ್ರ ಬೊಮ್ಮನಾಳ ಅವರು 30,000 ರೂ. ಗಳ ಲಂಚದ ಬೇಡಿಕೆ ಇಟ್ಟಿದ್ದರು. ಕೊನೆಗೆ 20,000ರೂ. ಲಂಚಕ್ಕೆ ಒಪ್ಪಿಕೊಂಡಿದ್ದರು ಎಂದು ಫಿರ್ಯಾದಿದಾರರು ಇಂದು ಅಕ್ಟೋಬರ್ 16 ರಂದು ಧಾರವಾಡ ಎ.ಸಿ.ಬಿ. ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಎ.ಸಿ.ಬಿ. ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಆರೋಪಿ ರಾಘವೇಂದ್ರ ಬೊಮ್ಮನಾಳ ಫಿರ್ಯಾದಿಯ ಕಡೆಯಿಂದ 20,000 ರೂ. ಲಂಚದ ಹಣ ಪಡೆದುಕೊಳ್ಳುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಬೆಳಗಾವಿಯ ಎಸಿಬಿ ಉತ್ತರ ವಲಯ ಪೊಲೀಸ್ಅಧೀಕ್ಷಕ ಬಿ ಎಸ್ ನೇಮಗೌಡ, ಮಾರ್ಗದರ್ಶನದಲ್ಲಿ, ಧಾರವಾಡದ ಎಸಿಬಿ ಪೊಲೀಸ ಉಪಾಧೀಕ್ಷಕ ಎಲ್ ವೇಣುಗೋಪಾಲ ನೇತೃತ್ವದಲ್ಲಿ ಪೊಲೀಸ್ ಇನ್ಸಪೆಕ್ಟರ್ ಬಿ.ಎ ಜಾಧವ, ಮಂಜುನಾಥ ಹಿರೇಮಠ, ಸಿಬ್ಬಂದಿಯವರಾದ ಗಿರೀಶ್ ಮನಸೂರ, ಲೊಕೇಶ ಬೆಂಡಿಕಾಯಿ, ಜೆ.ಜಿ.ಕಟ್ಟಿ, ಶಿವಾನಂದ ಕೆಲವಡಿ, ಕಾರ್ತಿಕ ಹುಯಿಲಗೋಳ, ಗಣೇಶ ಶಿರಹಟ್ಟಿ, ವಿರೇಶ, ರವೀಂದ್ರ ಯರಗಟ್ಟಿ, ಶಂಕರ ನರಗುಂದ ಮತ್ತಿತರರು ತಂಡದಲ್ಲಿ ಭಾಗವಹಿಸಿದ್ದರು.