ಧಾರವಾಡ: ”ಸಿವಿಲ್ ಆಸ್ಪತ್ರೆ ಮುಂದೆ ಹೈಡ್ರಾಮ: ವಿಷ ಕುಡಿದವನಿಗಿಂತ, ಹಣ ಹೊಡೆದವಳ ಆ್ಯಕ್ಟಿಂಗ್ ಸೂಪರ್ ಗುರು!”
ಧಾರವಾಡ: ಮೂರು ಹೆಸರುಗಳನ್ನು ಇಟ್ಟುಕೊಂಡು ಪ್ರೀತಿ ಮತ್ತು ಮದುವೆಯ ಹೆಸರಲ್ಲಿ ಯುವಕರಿಗೆ ವಂಚಿಸುತ್ತಿದ್ದ ‘ಮಾಯಾಂಗಿ’ಯೊಬ್ಬಳ ಅಸಲಿ ಆಟ ಈಗ ಬಯಲಾಗಿದೆ. ವಂಚನೆಗೊಳಗಾದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ, ಆಸ್ಪತ್ರೆ ಆವರಣದಲ್ಲೇ ಸಾರ್ವಜನಿಕರು ಈ ಕಿಲಾಡಿ ಲೇಡಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸಿವಿಲ್ ಆಸ್ಪತ್ರೆಯ ಮುಂಭಾಗ ನಡೆದಿದೆ.
ಬಂಧಿತ ಯುವತಿಯನ್ನು ಐಶ್ವರ್ಯ ಎಂದು ಗುರುತಿಸಲಾಗಿದ್ದು, ಈಕೆ ಅರೋಹಿ ಹಾಗೂ ರೇಣುಕಾ ಎಂಬ ಹೆಸರುಗಳಿಂದಲೂ ಗುರುತಿಸಿಕೊಳ್ಳುತ್ತಿದ್ದಳು. ಸುಂದರ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಈಕೆ, ಮೊದಲು ಪ್ರೀತಿಯ ನಾಟಕವಾಡಿ ನಂತರ ಮದುವೆಯಾಗುವುದಾಗಿ ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದಳು ಎನ್ನಲಾಗಿದೆ. ಸಂಜು ದೊಡ್ಡಮನಿ ಹಾಗೂ ಗುರು ವಕ್ಕುಂದ್ ಎಂಬ ಇಬ್ಬರು ಯುವಕರಿಗೆ ಈಕೆ ಲಕ್ಷಾಂತರ ರೂಪಾಯಿ ವಂಚಿಸಿರುವುದು ಸದ್ಯಕ್ಕೆ ಬೆಳಕಿಗೆ ಬಂದಿದೆ.
ಧಾರವಾಡದ ಗುರು ವಕ್ಕುಂದ್ ಎಂಬ ಯುವಕನಿಗೆ ಮದುವೆಯಾಗುವುದಾಗಿ ನಂಬಿಸಿದ್ದ ಐಶ್ವರ್ಯ, ಆತನಿಂದ ಹಂತ ಹಂತವಾಗಿ ಸುಮಾರು 7 ಲಕ್ಷ ರೂಪಾಯಿ ಹಣ ಕಿತ್ತಿದ್ದಳು. ಹಣ ಪಡೆದ ಮೇಲೆ ಆತ ನೀಡುತ್ತಿದ್ದ ಮದುವೆ ಪ್ರಸ್ತಾಪವನ್ನು ಆಕೆ ತಳ್ಳಿಹಾಕಿದ್ದಾಳೆ. ಇದರಿಂದ ಮನನೊಂದ ಗುರು, ಜಿಲ್ಲಾಸ್ಪತ್ರೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪ್ರಸ್ತುತ ಆತ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗುರುವನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಐಶ್ವರ್ಯನನ್ನು ಕಂಡ ಗುರು ಕುಟುಂಬಸ್ಥರು ಆಕ್ರೋಶಗೊಂಡರು. “ನನ್ನ ಮಗನ ದುಡ್ಡು ವಾಪಸ್ ಕೊಡು, ಇಲ್ಲವೇ ಅವನನ್ನು ಮದುವೆಯಾಗು” ಎಂದು ಗುರುವಿನ ತಾಯಿ ರತ್ನವ್ವ ಪಟ್ಟು ಹಿಡಿದರು. ಈ ವೇಳೆ ಮಾಧ್ಯಮದ ಕ್ಯಾಮರಾಗಳನ್ನು ನೋಡುತ್ತಿದ್ದಂತೆ ಐಶ್ವರ್ಯ ಅಲ್ಲಿಂದ ಓಡಿ ಹೋಗಲು ಯತ್ನಿಸಿದಳು. ಕೂಡಲೇ ಎಚ್ಚೆತ್ತ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಆಕೆಯನ್ನು ಬೆನ್ನಟ್ಟಿ ಹಿಡಿದು ಧರ್ಮದೇಟು ನೀಡಿ ಉಪನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
“ನನ್ನ ಮಗನ ಸ್ಥಿತಿಗೆ ಈಕೆಯ ಸುಲಿಗೆಯೇ ಕಾರಣ. ಇವಳ ಅಸಲಿ ಮುಖ ಎಲ್ಲರಿಗೂ ತಿಳಿಯಬೇಕು,” ಎಂದು ಗುರುವಿನ ತಾಯಿ ರತ್ನವ್ವ ನೋವು ತೋಡಿಕೊಂಡಿದ್ದಾರೆ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
