Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಗೆ “ನಾಳೆ ಬರ ಅಧ್ಯಯನ ತಂಡ”- ಯಾವ ಯಾವ ಊರಿಗೆ ಬರ್ತಿದ್ದಾರೆ ಗೊತ್ತಾ…!?

Spread the love

ಜಿಲ್ಲೆಗೆ ನಾಳೆ ಬರ ಅಧ್ಯಯನ ತಂಡದ ಭೇಟಿ; ಈರುಳ್ಳಿ, ಶೇಂಗಾ, ಹತ್ತಿ, ಸೋಯಾಬಿನ ಸೇರಿ ವಿವಿಧ ಬೆಳೆ ಹಾನಿ, ನರೇಗಾ ಕಾಮಗಾರಿ ಪರಿಶೀಲನೆ; ಬರ ವಾಸ್ತವತೆ ಮನವರಿಕೆಗೆ ಜಿಲ್ಲಾಡಳಿತದ ಸಿದ್ದತೆ

ಧಾರವಾಡ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಅವರ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡವು ಐದು ಜನ ಸದಸ್ಯರನ್ನೊಳಗೊಂಡಿದ್ದು, ಬಾಗಲಕೋಟ ಜಿಲ್ಲಾ ಪ್ರವಾಸದ ನಂತರ ನಾಳೆ ಮಧ್ಯಾಹ್ನ 3:30 ಗಂಟೆ ಸುಮಾರಿಗೆ ಧಾರವಾಡ ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ನಾಳೆ ಜಿಲ್ಲೆಗೆ ಆಗಮಿಸುವ ಕೇಂದ್ರ ತಂಡದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಸದಸ್ಯರಿದ್ದು, ಅವರಿಗೆ ಜಿಲ್ಲೆಯ ಬೆಳೆಹಾನಿ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಂಡವು ಮಧ್ಯಾಹ್ನ ಹಾರೋಬೆಳವಡಿ ಮೂಲಕ ಜಿಲ್ಲೆಗೆ ಆಗಮಿಸುತ್ತಿದ್ದು, ಹಾರೋಬೆಳವಡಿ, ಅಮ್ಮಿನಭಾವಿ, ಮರೇವಾಡ ಗ್ರಾಮಗಳ ವ್ಯಾಪ್ತಿಯಲ್ಲಿನ ವಿವಿಧ ರೈತರ ಜಮೀನುಗಳಲ್ಲಿ ಹತ್ತಿ, ಗೋವಿನಜೋಳ, ನೆಲಗಡಲೆ(ಶೇಂಗಾ), ಈರುಳ್ಳಿ, ಮೆಣಸಿನಕಾಯಿ, ಸೋಯಾಬಿನ್ ಬೆಳೆಗಳ ಹಾನಿ ಪರಿಶೀಲನೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ನರೇಗಾ ಯೋಜನೆಯ ಕಾರ್ಯಗಳನ್ನು ಸಹ ತಂಡವು ವೀಕ್ಷಿಸಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬರ ಅಧ್ಯಯನ ಪ್ರವಾಸ ತಂಡದಲ್ಲಿ ಎಣ್ಣೆ ಬೀಜಗಳ ಅಭಿವೃದ್ದಿ ಇಲಾಖೆಯ ನಿರ್ದೇಶಕ ಡಾ.ಜೆ. ಪೋನ್ನುಸ್ವಾಮಿ, ವೆಚ್ಚ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಮಹೇಂದ್ರ ಚಂಡೇಲಿಯ, ನೀತಿ ಆಯೋಗದ ಸಂಶೋಧನಾಧಿಕಾರಿ ಶಿವಚರಣ್ ಮೀನಾ ಹಾಗೂ ರಾಜ್ಯ ಕೃಷಿ ಆಯುಕ್ತ ವೈ.ಎಸ್ ಪಾಟೀಲ ಅವರು ಇದ್ದಾರೆ.

ಕೇಂದ್ರ ತಂಡ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಸಾಲಿನ ಮಳೆಯ ವಾಸ್ತವ ಪರಿಸ್ಥಿತಿ, ಬಿತ್ತನೆ ಆಗದಿರುವ ಬಗ್ಗೆ, ಹಲವು ಕಡೆ ಸಂಪೂರ್ಣ ಬೆಳೆ ಹಾನಿ, ಕೆಲವೆಡೆ ಬೆಳೆ ಇದ್ದರೂ ಉಂಟಾಗಲಿರುವ ತೀವ್ರ ಇಳುವರಿ ಕುಸಿತದ ಬಗ್ಗೆ ತಂಡಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *