ಧಾರವಾಡ ಜಿಲ್ಲೆಯ ಶಿಕ್ಷಕರ “ಬಹುದೊಡ್ಡ ತಲೆನೋವು” ತಪ್ಪಿಸಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಸರಕಾರಕ್ಕೆ ಪ್ರಸ್ತಾವನೆ…

ಶಿಕ್ಷಕರಿಗೆ ಪಠ್ಯೇತರ ಚಟುವಟಿಕೆಗಳ ಒತ್ತಡ ತಪ್ಪಿಸಲು ಸೂಕ್ತ ಕ್ರಮ
ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಪ್ರತ್ಯೇಕ ವ್ಯವಸ್ಥೆ
ಕ್ಲಸ್ಟರ್ ಮಟ್ಟದಲ್ಲಿ ಶಿಕ್ಷಕರ ತಾಂತ್ರಿಕ ನೆರವಿಗೆ ತಾತ್ಕಾಲಿಕ ಸಿಬ್ಬಂದಿ ನಿಯೋಜನೆಗೆ ಚಿಂತನೆ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ: ಧಾರವಾಡ ಜಿಲ್ಲೆಗೆ ಹಿಂದಿನ ಶೈಕ್ಷಣಿಕ ಶ್ರೀಮಂತಿಕೆ ಮರುಕಳಿಸುವಂತೆ ಮಾಡಿ, ಮತ್ತೇ ಧಾರವಾಡ ಜಿಲ್ಲೆಯನ್ನು ವಿದ್ಯಾಕಾಶಿಯನ್ನಾಗಿಸಲು ಎಲ್ಲ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸರಕಾರಿ ಶಾಲೆಗಳ ಶಿಕ್ಷಕರಿಗೆ ಆಗುತ್ತಿರುವ ಪಠ್ಯೇತರ ಚಟುವಟಿಕೆಗಳ ಹೊರೆಯನ್ನು ತಪ್ಪಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ಮೊಟ್ಟೆ, ಬಾಳೆಹಣ್ಣು ವಿತರಣೆಯಲ್ಲಿ ಶಿಕ್ಷಕರಿಗೆ ಆಗುತ್ತಿರುವ ತೊಂದರೆ, ಅನಾನುಕೂಲತೆಗಳನ್ನು ಪರಿಹರಿಸಲು ಸರಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಆನ್ಲೈನ್ ಹಾಗೂ ತಾಂತ್ರಿಕ ಕಾರ್ಯಗಳಿಗಾಗಿ ಶಿಕ್ಷಕರ ನೆರವಿಗೆ ಒಬ್ಬ ತಾಂತ್ರಿಕ ಸಿಬ್ಬಂದಿಯನ್ನು ಕ್ಲಸ್ಟರ್ ಮಟ್ಟದಲ್ಲಿ ತಾತ್ಕಾಲಿಕವಾಗಿ ನಿಯೋಜಿಸಲು ಚಿಂತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ, ಶಿಕ್ಷಕರು, ಪ್ರಧಾನಗುರುಗಳು, ಮುಖ್ಯೋಪಾಧ್ಯಾಯರು, ಸಿ.ಆರ್.ಪಿ, ಬಿ.ಆರ್.ಪಿ. ಬಿಸಿಯೂಟದ ಅಧಿಕಾರಿಗಳ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಿಷನ್ ವಿದ್ಯಾಕಾಶಿ – 2025 ರಡಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮತ್ತು ಶಿಕ್ಷಕರ ಸಮಸ್ಯೆಗಳ ಪರಿಹಾರದ ಕುರಿತು ದುಂಡು ಮೇಜಿನ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಮಿಷನ್ ವಿದ್ಯಾಕಾಶಿ ಯೋಜನೆಯಲ್ಲಿ ಕಳೆದ ವರ್ಷದ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಇದಕ್ಕೆ ಪ್ರಾಥಮಿಕ, ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಮೂಲ ಶಿಕ್ಷಣ ದೊರೆಯದಿರುವುದು ಕಾರಣವಾಗಿದೆ ಎಂದರು.
ಮೊಟ್ಟೆ, ಬಾಳೆಹಣ್ಣು ವಿತರಣೆಗೆ ಪ್ರತ್ಯೇಕ ವ್ಯವಸ್ಥೆ: ಶಿಕ್ಷಕರಿಗೆ ಪಠ್ಯ ಬೋಧನೆ ಜೊತೆಗೆ ಶಾಲಾ ಅವಧಿಯಲ್ಲಿ ಇತರ ಆಡಳಿತಾತ್ಮಕ ಹಾಗೂ ಪೌಷ್ಠಿಕ ಆಹಾರ ವಿತರಣೆ ಕಾರ್ಯ ನೀಡುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂಬ ದೂರು ಇದೆ. ಇದರಿಂದ ಪಾಠ ಕಲಿಸುವಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಬಿಸಿಯೂಟ ನೀಡುವ ಏಜನ್ಸಿ ಮೂಲಕವೇ ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಲು ಅಥವಾ ಅದಕ್ಕಾಗಿ ಬೇರೆ ಏಜನ್ಸಿ ನೇಮಿಸಲು ಸರಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮವಹಿಸುವಂತೆ ಉಪನಿರ್ದೇಶಕರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಹಾಜರಾತಿ, ಮೊಟ್ಟೆ, ಹಾಲು ದಾಖಲೆಗೆ ಒಂದೇ ಆ್ಯಪ್: ಅನೇಕ ಶಾಲೆಗಳಲ್ಲಿ ಕಂಪ್ಯೂಟರ್, ಇಂಟರ್ ನೇಟ್ ಸೌಲಭ್ಯವಿಲ್ಲ. ಸೌಲಭ್ಯವಿದ್ದರೂ ನೇಟ್ ಇರುವದಿಲ್ಲ. ಬಹುತೇಕರು ತಮ್ಮ ಮೊಬೈಲ್ ಮೂಲಕ ಮಕ್ಕಳ ಹಾಜರಾತಿ, ಮೊಟ್ಟೆ ವಿತರಿಸಿದ, ಹಾಲು ವಿತರಿಸಿದ ಬಗ್ಗೆ ಮಕ್ಕಳ ಹಾಜರಾತಿಯನ್ನು ಪ್ರತ್ಯೇಕ ಆ್ಯಪ್ಗಳಲ್ಲಿ ಆನ್ಲೈನ್ ಮೂಲಕ ದಾಖಲಿಸಿಸುವ ಅಗತ್ಯವಿದೆ. ಆದರೆ ಇವುಗಳಿಗೆ ಓಟಿಪಿ ಹಾಗೂ ನೇಟ್ವರ್ಕ ಸಮಸ್ಯೆ ಇರುವದರಿಂದ, ಇದು ಅರ್ಧ ದಿನದ ಕೆಲಸವಾಗುತ್ತಿದೆ ಎಂಬ ಅಸಮಾದಾನವಿದೆ. ಈ ಕುರಿತು ಸೂಕ್ತ ಪ್ರಸ್ತಾವನೆಯೊಂದಿಗೆ ಶಾಲಾ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಒಂದೇ ಆ್ಯಪ್ದಲ್ಲಿ ಮಕ್ಕಳ ಹಾಜರಾತಿ, ಮೊಟ್ಟೆ ವಿತರಣೆ, ಹಾಲು ವಿತರಿಸಿದ ಹಾಜರಾತಿಯನ್ನು ದಾಖಲಿಸಲು ಅನುವು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ತಾತ್ಕಾಲಿಕವಾಗಿ ತಾಂತ್ರಿಕ ಸಿಬ್ಬಂದಿ ನಿಯೋಜನೆ: ಶಿಕ್ಷಕರ ಸಮಸ್ಯೆಗಳನ್ನು ಕಡಿಮೆ ಮಾಡಿ, ಅವರು ಪ್ರತಿ ದಿನ ಶಾಲೆಯಲ್ಲಿ ಇದ್ದು, ಮಕ್ಕಳಿಗೆ ನಿಯಮಿತ ವರ್ಗಗಳನ್ನು ತೆಗೆದುಕೊಂಡು ಪೂರ್ಣಪ್ರಮಾಣದಲ್ಲಿ ಶೈಕ್ಷಕಣಿಕ ಕಾರ್ಯಗಳಲ್ಲಿ ನಿರತರಾಗಬೇಕು. ಅದಕ್ಕಾಗಿ ಅವರಿಗೆ ಎಲ್ಲ ಸಹಕಾರ ನೀಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಿದ್ದವಿದೆ. ಪ್ರತಿ ಸಿಆರ್ಪಿ ಕ್ಲಾಸ್ಟರ್ಗೆ ಒಬ್ಬ ತಾಂತ್ರಿಕ ಸಹಾಯಕ ಸಿಬ್ಬಂದಿಯನ್ನು ಸಿಎಸ್ಆರ್ ಅನುದಾನದಲ್ಲಿ ಪೂರೈಸಲು ಪ್ರಯತ್ನಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಶಿಕ್ಷಕರ ಸಮಸ್ಯೆಗಳನ್ನು ಸಾಧ್ಯವಾದಷ್ಟು ಜಿಲ್ಲಾ ಹಂತದಲ್ಲಿ ಪರಿಹರಿಸಲು ಪ್ರಯತ್ನ ಮಾಡುತ್ತೇವೆ. ಕೆಲವು ವಿಷಯಗಳು ಸರಕಾರದ ನೀತಿ, ಸಿದ್ಧಾಂತಗಳಿಗೆ ಸಂಬಂಧಿಸಿರುತ್ತವೆ. ಅಂತಹವುಗಳನ್ನು ಕ್ರೋಢಿಕರಿಸಿ, ಪರಿಹಾರಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.
ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡಬೇಕು. ಶಾಲೆಯಲ್ಲಿನ ಮುಖ್ಯೋಪಾಧ್ಯರು ಮಕ್ಕಳ ಬಗ್ಗೆ ಆದಷ್ಟು ಗಮನಹರಿಸಿ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೋ ಇಲ್ಲವೋ ಎಂದು ತಿಳಿದುಕೊಂಡು, ಬರದೇ ಹೋದರೆ ಅವರನ್ನು ಶಾಲೆಗೆ ಕರೆತರುವ ಕೆಲಸ ಮಾಡಬೇಕು ಎಂದು ಹೇಳಿದರು.
ಎಲ್ಲಿ ಅತಿಥಿ ಶಿಕ್ಷಕರ ಅವಶ್ಯಕತೆ ಇದೆಯೋ ಅಲ್ಲಿ ಅವರನ್ನು ಕಳುಹಿಸಿ. ತಮಗೆ ಬೇಕಾದ ಹಾಗೆ ಇಷ್ಟ ಬಂದಂತೆ ಶಿಕ್ಷಕರನ್ನು ಬೇರೆ ಬೇರೆ ಕಡೆ ವರ್ಗಾವಣೆ, ನಿಯೋಜನೆ ಮಾಡಿದರೆ ನೇರವಾಗಿ ಸಂಭಂದಿಸಿದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ, ಕ್ರಮಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಯಾವುದೇ ಶಿಕ್ಷಕರನ್ನು, ಅತಿಥಿ ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ, ನಿಯೋಜನೆ ಮಾಡಬೇಕಾದರೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮತಿ ಕೇಳಿ, ಪಡೆದು ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಉಪನಿರ್ದೇಶಕರಿಗೆ ನಿರ್ದೇಶಿಸಿದರು.
ಪ್ರತಿಯೊಂದು ಶಾಲೆಗಳಲ್ಲಿಯೂ 30 ಮಕ್ಕಳಿಗೆ ಒಬ್ಬ ಶಿಕ್ಷಕರು ಇರಬೇಕು. ಅಗತ್ಯವಿದ್ದರೆ ಸಿ.ಎಸ್.ಆರ್. ಅನುದಾನದಲ್ಲಿ ಅತಿಥಿ ಶಿಕ್ಷಕರನ್ನು ಕೊಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣವನ್ನು ನೀಡದೆ ಹೋದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರಶಿಕ್ಷಣಾಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಪ್ರತಿದಿನ ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬುದರ ಬಗ್ಗೆ ನಿಗಾ ಇಡಬೇಕು. ಶಾಲೆಯಿಂದ ಬಂದ ನಂತರ ಅವರು ಓದುತ್ತಾರೋ, ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕು ಎಂದು ಇತರ ಇಲಾಖೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ತಾವು ಜಿಲ್ಲೆ ಎಲ್ಲ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯ, ಶೈಕ್ಷಣಿಕ ಗುಣಮಟ್ಟ, ಮಕ್ಕಳ ಮತ್ತು ಶಿಕ್ಷಕರ ಹಾಜರಾತಿ, ಅಭಿವೃದ್ದಿ ಕಾರ್ಯಗಳನ್ನು ಪರಿಶೀಲಿಸುತ್ತೇನೆ ಎಂದು ಹೇಳಿದರು.
ಶಿಕ್ಷಕರಿಗೆ ಪಠ್ಯಕ್ರಮ, ಬೋಧನೆ ಮೊದಲ ಆಧ್ಯತೆ ಆಗಬೇಕು. ಉಳಿದವುಗಳ ಬಗ್ಗೆ ಆ ಮೇಲೆ ನೋಡಬೇಕು. ಈಗ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶೈಕ್ಷಣಿಕ ಗುಣಮಟ್ಟ, ಪ್ರಗತಿಯನ್ನು ಗಮನಿಸಿದಾಗ ಶಿಕ್ಷಕರ ಸಾಧನೆ, ಅವರ ತೊಡಗಿಸಿಕೊಳ್ಳುವಿಕೆ ಅತ್ಯಂತ ಕಡಿಮೆ ಇದೆ ಎಂಬುದು ತಿಳಿದು ಬರುತ್ತಿದೆ ಎಂದು ಅವರು ಹೇಳಿದರು.
ಶಿಕ್ಷಕರಿಂದ ಶಾಲಾ ಪಠ್ಯದ ಅಪೂರ್ಣತೆ, ನಿರ್ಲಕ್ಷ್ಯ, ಉದಾಸೀನತೆಗಳಿಗೆ ಇನ್ನು ಮುಂದೆ ಅವಕಾಶವಿಲ್ಲ. ಯಾವುದೇ ಶಿಕ್ಷಕರು ತಮಗೆ ಸಮಸ್ಯೆಗಳಿದ್ದಲ್ಲಿ, ಡಿಡಿಪಿಐ ಅವರಿಗೆ ತಿಳಿಸಿ, ಅಲ್ಲಿ ಪರಿಹಾರವಾಗದಿದ್ದಲ್ಲಿ ನನಗೆ ತಿಳಿಸಿ. ನಾನು ನಿಯಮಾನುಸಾರ ಕ್ರಮವಹಿಸಿ, ಪರಿಹರಿಸುತ್ತೇನೆ. ಎಲ್ಲರೂ ಪ್ರತಿ ದಿನ ಶಾಲೆಯಲ್ಲಿದ್ದು, ಮಕ್ಕಳಿಗೆ ಪಠ್ಯಾನುಸಾರ ಕಲಿಸಬೇಕು. ಪ್ರಸಕ್ತ ವರ್ಷ ಪೂರ್ಣ ಪ್ರಮಾಣದ ಗುರಿ ಸಾಧಿಸಬೇಕು. ಯಾವ ಒಬ್ಬ ಮಗು ಸಹ ಶಾಲೆಯಿಂದ ಹೊರಗೆ ಉಳಿಯಬಾರದು ಮತ್ತು ಪ್ರತಿ ವರ್ಗದ ವಿದ್ಯಾರ್ಥಿಗಳಿಗೆ ನೀಡಿರುವ ಪಠ್ಯ ಕ್ರಮ ಪೂರ್ಣಗೊಂಡು ಅಕ್ಷರಗಳ ಓದು, ಬರಹ ಬರಲೇಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಪೆÇ್ರಫೆಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ, ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಹಿಂದುಳಿದ ಕಲ್ಯಾಣ ಇಲಾಖೆ ಉಪನಿದೇಶಕ ಗಂಗಾಧರ ದೊಡಮನಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭಾ. ಪಿ., ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ಜಿಲ್ಲಾ ವಕ್ಫ್ ಅದಿಕಾರಿ ತಾಜುದ್ದೀನ ಶೆಖ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ, ಉಮೇಶ ಭೂಮಕ್ಕನವರ, ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ಡಾ. ರೇಣುಕಾ ಅಮಲಜೇರಿ, ಬಿಸಿಯೂಟ ವಿಭಾಗದ ಅಧಿಕಾರಿ ರೂಪಾ ಪುರಂಕರ, ಜಿಲ್ಲೆಯ ಸಿಆರ್ಪಿ, ಬಿಆರ್ಪಿ, ಮುಖ್ಯೋಪಾಧ್ಯಯರು, ಪ್ರಧಾನ ಗುರುಗಳು ಮತ್ತು ಶಿಕ್ಷಕರನ್ನು ಪ್ರತಿನಿಧಿಸುವಂತೆ ವಿವಿಧ ಅಧಿಕಾರಿ, ಸಿಬ್ಬಂದಿಗಳಿಂದ ಶೈಕ್ಷಣಿಕ ಸುಧಾರಣೆ ಹಾಗೂ ಶಿಕ್ಷಕರ ಸಮಸ್ಯೆಗಳ ಮತ್ತು ಪರಿಹಾರಗಳ ಕುರಿತು ಅಭಿಪ್ರಾಯ ಪಡೆದು, ಚರ್ಚಿಸಲಾಯಿತು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಿಷನ್ ವಿದ್ಯಾಕಾಶಿಯ ಸಂಯೋಜಕ, ವಾರ್ತಾ ಸಹಾಯಕ ಅಧಿಕಾರಿ ಡಾ. ಸುರೇಶ ಹಿರೇಮಠ ಅವರು ಸ್ವಾಗತಿಸಿದರು. ಶಿಕ್ಷಕ ಫಿರೋಜ್ ಗುಡೇನಕಟ್ಟಿ ಅವರು ವಂದಿಸಿದರು.
ಸಭೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ವಲಯದಲ್ಲಿ ಸುಧಾರಣೆಗಾಗಿ ಶ್ರಮಿಸುತ್ತಿರುವ ಶೈಕ್ಷಣಿಕ ಚಿಂತಕ ಮಾಂತೇಶ ಹೊಂಗಲ, ಕುಂದಗೋಳ ತಾಲೂಕಿನ ತಿರುಮಲ ಸರ್ಕಾರೇತರ ಸಂಸ್ಥೆಯ ಸಚಿನ ಪಾಟೀಲ ಸೇರಿದಂತೆ ಇತರರು ಭಾಗವಹಿಸಿದ್ದರು.