ಕಾಂಗ್ರೆಸ್ ತೊರೆಯುತ್ತಿರೋ ಮುಸ್ಲಿಂ ಮುಖಂಡರು: ‘ಕೈ’ ಯಲ್ಲಿ ಏನಾಗುತ್ತಿದೆ..!
1 min readಹುಬ್ಬಳ್ಳಿ: ಶಹರ ಮತಕ್ಷೇತ್ರದ ಮುಸ್ಲಿಂ ಮುಖಂಡರಲ್ಲಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿಯ ಕೆಲ ನಾಯಕರ ಬಗ್ಗೆ ಇದ್ದ ಅಸಮಾಧಾನ ನಿಧಾನವಾಗಿ ಬಹಿರಂಗಗೊಳ್ಳತೊಡಗಿದೆ. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಹಲವರು ಈಗ ಕಾಂಗ್ರೆಸ್ ಪ್ಕಕ್ಷತೊರೆದು ಬೇರೆ ಬೇರೆ ಪಕ್ಷ ಸೇರುತ್ತಿದ್ದಾರೆ.
ಧಾರವಾಡ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಮ್ಮ ಪಕ್ಷವನ್ನು ಭದ್ರಗೊಳಿಸಬೇಕೆಂದು ಸದ್ದಿಲ್ಲದೆ ಕಾರ್ಯ ಮಾಡುತ್ತಿದ್ದ ಓವೈಸಿಯ ಪಕ್ಷ ಎಂ ಐ ಎಂ (MIM) ಮುಸ್ಲಿಂ ಸಮಾಜದ ಯುವ ಮುಖಂಡ ಹಾಗೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಾಜಿ ನಾಮನಿರ್ದೇಶಿತ ಸದಸ್ಯ ನಜೀರ ಹೊನ್ಯಾಳ ಅವರನ್ನು ತನ್ನ ಪಕ್ಷದಲ್ಲಿ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ ಅವರ ಚುನಾವಣೆಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಶ್ರಮಿಸುತ್ತಿದ್ದ ಹೊನ್ಯಾಳ ಈಗ ಏಕಾಏಕಿ ಕಾಂಗ್ರೆಸ್ ತೊರೆದು MIM ಸೇರಿರುವುದು ಶಹರ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಲ್ಲ ಎಂಬುದು ಬಹಿರಂಗಗೊಂಡಂತಾಗಿದೆ.
ಡಿ.ಕೆ. ಶಿವಕುಮಾರ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಆದಮೇಲೆ ಕಾಂಗ್ರೆಸ್ ಪಕ್ಷ ಸಂಘಟಣೆ ಬಲಿಷ್ಟಗೊಳಿಸುವತ್ತ ಗಮನ ಹರಿಸುತ್ತಿದ್ದರೆ, ಇತ್ತ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬೇರೆ ಪಕ್ಷ ಸೇರುವ ಪರ್ವ ಪ್ರಾರಂಭಗೊಂಡಂತಾಗಿದೆ. ಅದೂ ಮಹಾನಗರ ಪಾಲಿಕೆ ಚುನಾವಣೆ ಹೊಸ್ತಿಲಲ್ಲಿ ಪಕ್ಷಾಂತರ ಪರ್ವ ಕಾಂಗ್ರೆಸ್ ಪಕ್ಷಕ್ಕೆ ಹಾನಿ ಮಾಡುವುದಂತು ನಿಶ್ಚಿತ.