Posts Slider

Karnataka Voice

Latest Kannada News

ಕೊರೋನಾದಿಂದ ಮೃತಪಟ್ಟ ಪ್ರಾಂಶುಪಾಲರ ಕುಟುಂಬಕ್ಕೆ 30ಲಕ್ಷದ  ಚೆಕ್ ವಿತರಣೆ

Spread the love

ಬೆಂಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕೊರೋನಾ ಸೋಂಕಿನಿಂದ ಮೃತರಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಾರನ‌ ಬೀಡು ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಪ್ಪ ಫಕೀರಪ್ಪ ತಳಗಡಿಯವರ ಕುಟುಂಬಕ್ಕೆ ಉಪಮುಖ್ಯಮಂತ್ರಿ ಗೋವಿಂದ  ಕಾರಜೋಳ  ಕುಮಾರಕೃಪ ಅತಿಥಿಗೃಹದಲ್ಲಿ ಪರಿಹಾರ ಹಣವಾಗಿ 30ಲಕ್ಷ ರೂ ಮೌಲ್ಯದ ಚೆಕ್ ಅನ್ನು ವಿತರಿಸಿದರು.


ನಂತರ ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕೊರೋನಾ ನಿಯಂತ್ರಣ,‌ ಕೊರೋನ ಸೋಂಕಿತರಿಗೆ ಚಿಕಿತ್ಸೆ ಹಾಗೂ ಹಲವಾರು ಪರಿಹಾರ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನ ಗೊಳಿಸುತ್ತಿದೆ. ಸಮಾಜ ಕಲ್ಯಾಣ ಇಲಾಖೆಯು ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳನ್ನು ಜಿಲ್ಲಾಡಳಿತಗಳ ಕೋರಿಕೆಗೆ ಅನುಗುಣವಾಗಿ ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಿ, ಹೊರರಾಜ್ಯಗಳಿಂದ ಬಂದವರು ಹಾಗೂ ಜಿಲ್ಲಾಡಳಿತ ಸೂಚಿಸಿದವರಿಗೆ ಆರೈಕೆ ಮಾಡಲಾಗುತ್ತಿದೆ. ಶ್ರೀ ಮಲ್ಲಪ್ಪ ಫಕೀರಪ್ಪ ತಳಗಡಿ ಅವರು ಕ್ವಾರಟೈನ್ ಕೇಂದ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಕೊರೋನಾ ವೈರಸ್ ಸೊಂಕಿನಿಂದ ಆಗಸ್ಟ್ 19 ರಂದು ಮೃತಪಟ್ಟಿದ್ದರು. ಅವರ ಸೇವೆ ಸ್ಮರಣೀಯ ಎಂದು ಸ್ಮರಿಸಿದರು.
ಮೃತರ ಕುಟುಂಬ ವರ್ಗಕ್ಕೆ ಪರಿಹಾರ ಹಣವಾಗಿ 30ಲಕ್ಷ ರೂ ನೀಡಿ, ಚಿಕಿತ್ಸೆ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗಿದೆ.ಅವರ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ನಿಯಮದಂತೆ ಅನುಕಂಪದ ಆಧಾರದಡಿ ನೌಕರಿಯನ್ನು ನೀಡಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.
ನಂತರ ಶಿಕ್ಷಕರ ಕ್ಷೇತ್ರ ಹಾಗೂ ಪದವಿಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರೊಂದಿಗೆ ಡಿಸಿಎಂ ಸಭೆ ನಡೆಸಿ , ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಭೋದಕ ಹಾಗೂ ಭೋದಕೇತರರ ಸಿಬ್ಬಂದಿ ವರ್ಗದವರ ವಿವಿಧ ಸಮಸ್ಯೆ ಹಾಗೂ ಸೌಲಭ್ಯಗಳ ಕುರಿತು ಚರ್ಚಿಸಿದರು.
ಕರ್ನಾಟಕ ವಸತಿ ಶಿಕ್ಷಣ ಸಂಘಗಳ ಸಂಘದ ಅಧೀನ ವಸತಿ ಶಾಲೆಗಳ ಭೋದಕ ಸಿಬ್ಬಂದಿಗಳಿಗೆ ಹಿರಿಯ ಐಎಎಸ್ ಅಧಿಕಾರಿ ಶ್ರೀ ಕುಮಾರ ನಾಯಕ್ ಅವರ ನೇತೃತ್ವದ ಸಮಿತಿಯ ಶಿಫಾರಸ್ಸಿನಂತೆ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡುವುದು. ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮೂಲವೇತನದ ಶೇ. 10 ರಷ್ಟು ವಿಶೇಷ ಭತ್ಯೆಯನ್ನು ಮಂಜೂರು ಮಾಡುವುದು, ವಸತಿ ನಿಲಯಗಳ ಖಾಯಂ ನೌಕರರಿಗೆ ಮತ್ತು ಅವರ ಅವಲಂಭಿತ ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಜ್ಯೋತಿ ಸಂಜೀವಿನಿ ಸೌಲಭ್ಯ ಅನುಷ್ಠಾನ ಗೊಳಿಸುವುದು, ಖಾಯಂ ಶಿಕ್ಷಕರುಗಳಿಗೆ ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ನೀಡುವುದು, ನೌಕರರಿಗೆ ನಿವೃತ್ತಿ , ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯ ವಿಸ್ತರಣೆ, ಶಾಲೆಗಳ ನೌಕರರಿಗೆ ಕಡ್ಡಾಯ ಜೀವ ವಿಮಾ ಯೋಜನೆ( ಕೆಜಿಐಡಿ) ಮತ್ತು ಸಾಮೂಹಿಕ ಗುಂಪು ವಿಮಾ ಯೋಜನೆ (ಇಜಿಐಎಸ್ ) ಯ ಸೌಲಭ್ಯಗಳನ್ನು ವಿಸ್ತರಿಸುವುದು ಸೇರಿದಂತೆ ವಿವಿಧ ವಿಷಯಗಳು‌ ಹಾಗೂ ಸೌಲಭ್ಯಗಳ ಕುರಿತು ಚರ್ಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಮರಿತಿಬ್ಬೇಗೌಡ, ಡಾ.ವೈ.ಎ.ನಾರಾಯಣ ಸ್ವಾಮಿ, ಅರುಣ ಶಹಾಪುರ, ಡಾ. ಚಂದ್ರಶೇಖರ್ ಪಾಟೀಲ್,  ನಿರಾಣಿ ಹಣಮಂತ ರುದ್ರಪ್ಪ,  ಅ.ದೇವೇಗೌಡ , ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆಯ ಸಲಹೆಗಾರ ಇ.ವೆಂಕಟಯ್ಯ,
ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕ ರಾಘವೇಂದ್ರ, ಡಿಸಿಎಂ ಅವರ ಆಪ್ತಕಾರ್ಯದರ್ಶಿ  ವಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *