ನಕಲಿ ಬೀಜ ಮಾರಾಟಗಾರರ ಒತ್ತಡಕ್ಕೆ ಮಣಿಯುವುದು ತಾಯಿ ಮಗುವಿಗೆ ವಿಷವುಣಿಸಿದಂತೆ: ಬಿ.ಸಿ.ಪಾಟೀಲ್

ಕೊಪ್ಪಳ: ರೈತರಿಗೆ ಒಳ್ಳೆಯದು ಮಾಡುವುದೇ ನನ್ನ ಕರ್ತವ್ಯ. ನಕಲಿ ಕಳಫೆ ಬೀಜ ಗೊಬ್ಬರ ಮಾರಾಟಗಾರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಒತ್ತಡಕ್ಕೆ ಮಣಿಯುವುದು ತಾಯಿಯೇ ಮಗುವಿಗೆ ವಿಷವುಣಿಸಿದಂತೆ ಎಂದು ಕೃಷಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳದಲ್ಲಿಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಕಳಫೆ ಬೀಜ ಮಾರಾಟ ಮಾಡುವ ದೊಡ್ಡ ಜಾಲವನ್ನು ನಾವು ಬೇಧಿಸಿದ್ದೇವೆ.ಇನ್ನೂ ಬೇಧಿಸುವುದು ಬಹಳಷ್ಟಿದೆ. ಕಳಫೆ ಬೀಜ ಮಾರಾಟ ಮಾಡುವವರ ಕತೆ ಮುಗಿಸುತ್ತೇವೆ. ಕಳಫೆ ಬೀಜ ಮಾರಾಟದವರ ಒತ್ತಡ ತಂತ್ರಗಳಿಗೆ ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ. ಕಳಫೆ ಬೀಜ ಮಾರಾಟವನ್ನು ನಾವೇ ಪತ್ತೆ ಮಾಡುತ್ತಿದ್ದೇವೆ. ಇಷ್ಟು ವರ್ಷ ಅದು ಪತ್ತೆಯಾಗಿದ್ದಿಲ್ಲ. ಕಳಫೆ ಬೀಜದ ಬಗ್ಗೆ ಯಾರೂ ಕಾಳಜಿ ವಹಿಸಿರಲಿಲ್ಲ. ತಾವು ಕೃಷಿ ಸಚಿವರಾದ ಬಳಿಕ ಖುದ್ದಾಗಿ ಇಂತಹದೊಂದು ಡ್ರೈವ್ ಸ್ಟಾರ್ಟ್ ಮಾಡಲಾಗಿದ್ದು ರಾಯಚೂರು, ಬೀದರ, ಹಾವೇರಿ ಸೇರಿದಂತೆ ಇಲ್ಲಿಯವರೆಗೂ ಸುಮಾರು 15 ಕೋಟಿ ಮೊತ್ತದ ಕಳಫೆ ಬೀಜ ಪತ್ತೆ ಮಾಡಲಾಗಿದೆ. ಅನ್ನ ಕೊಡುವ ರೈತನಿಗೆ ಯಾವುದೇ ಕಾರಣಕ್ಕೂ ಬಿತ್ತನೆ ಸಮಯದಲ್ಲಿ ಕಳಫೆ ಬೀಜ ಪೂರೈಕೆ ಆಗಬಾರದು. ಕಳಫೆ ಬೀಜದ ಜೊತೆಗೆ ನಕಲಿ ರಸಗೊಬ್ಬರ, ಔಷಧಿಯನ್ನು ಸೀಜ್ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ಬೀಜ ಕಾಯಿದೆ ಪ್ರಕಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ಕೊರೋನಾ ಪಾಸಿಟಿವ್ ಬಂದವರು ಸ್ವತಃ ತಮ್ಮೊಂದಿಗೆ ಯಾರೆಲ್ಲ ಸಂಪರ್ಕಕ್ಕೆ ಬಂದಿದ್ದರು. ಎಲ್ಲೆಲ್ಲಿ ಓಡಾಡಿದ್ದರೆಂಬ ಮಾಹಿತಿಯನ್ನು ಅವರೇ ಸ್ವತಃ ನೀಡಿದರೆ ಚಿಕಿತ್ಸೆಗೆ ಮತ್ತು ಇನ್ನಿತರರಿಗೆ ಸೋಂಕಿನಿಂದ ತಪ್ಪಿಸಲು ಸಹಾಯಕವಾಗುತ್ತದೆ. ಈಗ ಪರೀಕ್ಷಾ ಕೇಂದ್ರಗಳು ಹೆಚ್ಚಾಗಿರುವ ಕಾರಣ ಪ್ರಕರಣಗಳನ್ನು ಹೆಚ್ಚೆಚ್ಚು ಪತ್ತೆ ಮಾಡಲು ಅನುಕೂಲವಾಗುತ್ತಿದೆ. ಹೊರಗಿನಿಂದಲೇ ಬಂದವರಿಂದ ಹೆಚ್ಚಾಗಿ ಸೋಂಕು ಹರಡುತ್ತಿದೆ. ಎಲ್ಲರೂ ತಪ್ಪದೇ ಸಾಮಾಜಿಕ ಅಂತರ,ಸರ್ಕಾರದ ನಿಯಮ ಪಾಲನೆ ಅನುಸರಿಸಬೇಕೆಂದು ಬಿ.ಸಿ.ಪಾಟೀಲ್ ಹೇಳಿದರು.
ಇದೇ ಸಂದರ್ಭದಲ್ಲಿ ಹೆಚ್.ವಿಶ್ವನಾಥ್ ಅವರಿಗೆ ಮೇಲ್ಮನೆ ಸ್ಥಾನ ಕೈಬಿಟ್ಟಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವರು, ವಿಶ್ವನಾಥರಿಗೂ ಮಾಡಬೇಕೆನ್ನುವ ಒತ್ತಾಯ ಇದೆ.ಆರ್.ಶಂಕರ್, ಎಂಟಿಬಿ, ವಿಶ್ವನಾಥ್ ಮೂವರಿಗೂ ಮೇಲ್ಮನೆ ಸ್ಥಾನ ಸಿಗಲಿದೆ ಎಂಬ ಭರವಸೆಯಿತ್ತು. ಅದರಂತೆ ಇಬ್ಬರಿಗೆ ಸಿಕ್ಕಿದೆ. ಇನ್ನೂ ನಾಲ್ಕೈದು ಸ್ಥಾನಗಳಿವೆ. ಸದ್ಯದಲ್ಲಿಯೇ ಇನ್ನೊಬ್ಬರಿಗೂ ಕೊಡಬಹುದು ಎಂದು ಉತ್ತರಿಸಿದರು.