Posts Slider

Karnataka Voice

Latest Kannada News

ತೌಖ್ತೆ ಚಂಡಮಾರುತ: ಮೀನುಗಾರರ ಬದುಕು ದುಸ್ತರ

Spread the love

ಬೈಂದೂರು ( ಮರವಂತೆ) : ತೌಖ್ತೆ ಚಂಡಮಾರುತಕ್ಕೆ ಕರಾವಳಿ ಅಕ್ಷರಶ ನಡುಗಿ ಹೋಗಿದೆ. ಮರವಂತೆಯ  500 ಕ್ಕೂ ಹೆಚ್ಚು ಮೀನುಗಾರರು ಕುಟುಂಬ ಜೀವವನ್ನು ಕೈಯಲ್ಲಿ ಹಿಡಿದು ಕೂತಿದ್ದಾರೆ. ಅವರ ಸದ್ಯದ ಸ್ಥಿತಿ ಶೋಚನೀಯವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಅವರಿಗೆ ನೆರವಿನ ಹಸ್ತವನ್ನು ಇನ್ನೂ ಚಾಚಿಲ್ಲ. ಇಲ್ಲಿನ ಕುಟುಂಬಗಳನ್ನು ಸ್ಥಳಾಂತರ ಮಾಡುವ ಯೋಚನೆ ಇನ್ನೂ ಸರಕಾರಕ್ಕೆ ಬಂದಂತಿಲ್ಲ.

https://www.youtube.com/watch?v=lPMSMjgRDiQ
exclusive video


ಸ್ಥಳೀಯರು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಮರವಂತೆ ಕಡಲಾಕಿನಾರೆಯ ಸಮೀಪದ ಸಂಪರ್ಕ ರಸ್ತೆ ಸಮದ್ರ ಪಾಲಾಗಿದೆ. ಸಾವಿರಾರು ತೆಂಗಿನ ಮರಗಳು, ಮೀನುಗಾರಿಕಾ ದೋಣಿಗಳು ಸಮುದ್ರ ಸೇರಿವೆ. ಯಾವ ಸಂದರ್ಭದಲ್ಲೂ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಮೀನುಗಾರರ ಕುಟುಂಬಕ್ಕೆ ಈಗ ತುರ್ತಾಗಿ ಬೇಕಾಗಿರುವುದು ಗಂಜಿ ಕೇಂದ್ರ ಸ್ಥಾಪನೆ ಮತ್ತು ಸ್ಥಳಾಂತರ ವ್ಯವಸ್ಥೆ. ಆದರೆ ಜನಪ್ರತಿನಿಧಿಗಳು ಮತ್ತು ಜಿಲ್ಲೆಯ ಅಧಿಕಾರಿ ವರ್ಗ ಇನ್ನೂ ಈ  ವಿಚಾರದ ಬಗ್ಗೆ ನಿರ್ದಾರ ಕೈಗೊಂಡಿಲ್ಲ.
ಇಂದು ಬೆಳಗ್ಗೆ ಮರವಂತೆ ಕಡಲಕಿನಾರೆಗೆ ಭೇಟಿ ನೀಡಿದಾಗ ಕೆಲವು ಮನಕುಲಕುವ ದೃಷ್ಯಗಳು ಕಣ್ಣಿಗೆ ಬಿದ್ದವು. ಬಡ ಮೀನುಗಾರರ ಕುಟುಂಬ ರಕ್ಷಣೆಗಾಗಿ ಮನೆ ಗೋಡೆಗೆ ತಮ್ಮ ಬದುಕಿನ ಮುಖ್ಯ ಭಾಗವಾದ ದೋಣಿಗಳನ್ನು ಅಡ್ದಲಾಗಿ ಇಡುತ್ತಿರುವುದು ಕಂಡು ಬಂತು. ಹೆಣ್ಣು ಮಕ್ಕಳು ಕಣ್ಣೀರು ಸುರಿಸುತ್ತಿರುವ ದೃಷ್ಯ ನೋಡಲಾಗುತ್ತಿಲ್ಲ. ಅವರ ಕಟ್ಟಿಕೊಂಡ ಬದುಕು ಯಾವ ಕ್ಷಣದಲ್ಲಾದರೂ ಕೊಚ್ಚಿ ಹೋಗುವ ಭಯ ಅವರನ್ನು ಆವರಿಸಿದೆ. ಯಾವ ಸಂದರ್ಭದಲ್ಲಾದರೂ ಸಮುದ್ರದ ರಾಕ್ಷಸ ಅಲೆ ಕಡಲ ತಡಿಯ ಮನೆಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.
“ನಮ್ಮ ರಕ್ಷಣೆಗೆ ಯಾರು ಇದುವರೆಗೂ ಯಾರೂ ಬಂದಿಲ್ಲ. ಎರಡು ವಾರದ  ಹಿಂದೆ ಅಧಿಕಾರಿಗಳು ಭೇಟಿ ನೀಡಿ, ವಿಡಿಯೋ ಮಾಡಿಕೊಂಡು ಹೋಗಿದ್ದರು. ನಮಗೆ ಯಾವುದೇ ಸ್ಪಷ್ಟ ಭರವಸೆಯನ್ನು ನೀಡಿಲ್ಲ. ಸಂಪರ್ಕ ರಸ್ತೆ ನೀರುಪಾಲಾದ ಮೇಲೆ ಎರಡು ಲೋಡು ಕಲ್ಲು ತಂದು ಹಾಕಿದ್ದಾರೆ. ಇದೇ ಕೆಲಸವನ್ನು ಮೂರು ದಿನದ ಹಿಂದೆ ಮಾಡಿದ್ದರೆ, ರಸ್ತೆಯಾದರೂ ಉಳಿತಿತ್ತು: ಇನ್ನಾದರೂ ಸರಕಾರ ಮತ್ತು ಅಧಿಕಾರಿ ವರ್ಗ ಇಲ್ಲಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಿ”, ಎಂದು ಸ್ಥಳೀಯ ಮೀನುಗಾರ ಕುಟುಂಬದ ಮಹಿಳೆ ತಿಳಿಸಿದರು.
ಸಮುದ್ರದ ಅಲೆಯ ರಭಸಕ್ಕೆ ಮನೆಗಳಿಗೆ ಉಪ್ಪು ನೀರಿನ ಸತತ ಸಿಂಪಡಣೆ ಆಗುತ್ತಿದ್ದು, ಮನೆಯಲ್ಲಿ ಕೂರಲು ಮಲಗಲೂ ಅಗದ ಸ್ಥಿತಿ ಇದೆ. ಮೀನುಗಾರರ ಕುಟುಂಬ ಕಡಲಕ್ಕೊರೆತ ತಡೆಗೆ ತಾನೆ ಮುಂದಾಗಿದೆ. ಮರಳಿನ ಚೀಲವನ್ನು ಜೋಡಿಸಿಡುವ ಕಾರ್ಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದ್ದಾರೆ. ಸ್ಥಳೀಯ ಮೀನುಗಾರರ ಮುಖ್ಯಸ್ಥರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.
ನಮಗೆ ಬೇಕಾಗಿರುವುದು ತುರ್ತಾಗಿ ಬೇಕಾಗಿರುವವುದು ದೊಡ್ಡ ಬಂಡೆ ಕಲ್ಲುಗಳು. ಬಂಡೆ ಕಲ್ಲುಗಳಿಂದ ಮಾತ್ರ ಸಮುದ್ರ ಕೊರೆತವನ್ನುಸಲ್ಪ ಮಟ್ಟಿಗೆ ತಡೆಯಬಹುದು. ಸಚಿವರು ಮತ್ತು ಶಾಸಕರು ತಕ್ಷಣವೇ ಇದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


Spread the love

Leave a Reply

Your email address will not be published. Required fields are marked *