“ನಾನೂ ಹಿಂದೂ” ಬಾಬರಿ ಆಸ್ಪತ್ರೆಗ 50 ಸಾವಿರ ಕೊಡ್ತೇನಿ: ಭಾತೃತ್ವ ಬೆಸೆಯುವುದಕ್ಕೆ ಮುಂದಾದ ಕನ್ನಡಿಗ
1 min readಹಾವೇರಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆಯಾದ ನಂತರ ಬಾಬರಿ ಮಸೀದಿಗಾಗಿ ನೀಡಿದ್ದ ಐದು ಎಕರೆ ಭೂಮಿಯಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದಕ್ಕೆ ರಾಣೆಬೆನ್ನೂರಿನ ವಕೀಲರೋರ್ವರು 50 ಸಾವಿರ ದೇಣಿಗೆ ನೀಡಲು ಮುಂದಾಗಿದ್ದಾರೆ.
ರಾಣೆಬೆನ್ನೂರಿನ ವಕೀಲ ನಾಗರಾಜ ಕುಡಪಲಿ ಎಂಬುವವರೇ ಆಸ್ಪತ್ರೆ ನಿರ್ಮಾಣಕ್ಕೆ ಐವತ್ತು ಸಾವಿರ ರೂಪಾಯಿ ದುಡಿದ ಹಣವನ್ನ ಕೊಡಲು ಮುಂದಾಗಿದ್ದಾರೆ. ನಾನು ಹಿಂದೂ ಅನ್ನುವುದಕ್ಕಿಂತ ಭಾರತೀಯ ಎಂಬ ಕಾರಣಕ್ಕೆ ದೇಣಿಗೆ ನೀಡಲು ಮುಂದಾಗಿದ್ದೇನೆ ಎಂದು ನಾಗರಾಜ ಹೇಳಿಕೊಂಡಿದ್ದಾರೆ.
ನಾನು ಕೊಡುವ ಹಣವನ್ನ ಬಾಬರಿ ಆಸ್ಪತ್ರೆಯವರು ತೆಗೆದುಕೊಳ್ಳಬೇಕೆಂದು ಕೂಡಾ ಮನವಿ ಮಾಡಿಕೊಂಡಿರುವ ನಾಗರಾಜ, ಯಾರೇ ಒಳ್ಳೆಯ ಕೆಲಸ ಮಾಡಲು ಮುಂದಾದರೂ ನಾನು ನನ್ನಿಂದ ಆಗಿರುವ ಸಹಾಯ ಮಾಡುವೆ ಎಂದು ಹೇಳಿದ್ದಾರೆ.
ಜಾತಿ-ಮತ ಮಾಡಿ ಬದುಕು ನಡೆಸುವುದಕ್ಕಿಂತ ಸಹಬಾಳ್ವೆ ನಡೆಸುವುದು ಲೇಸು ಎಂಬುದಕ್ಕೆ ನಾಗರಾಜ ಕುಡಪಲಿ ಉದಾಹರಣೆಯಾಗಿ ನಿಲ್ಲುತ್ತಾರೆ. ಇಂತವರ ಸಂಖ್ಯೆ ಹೆಚ್ಚಾಗಲಿ ಎಂದು ಮಾನವೀಯ ಗುಣ ಹೊಂದಿದವರು ಬಯಸುತ್ತಿದ್ದಾರೆ.