ಆಯುರ್ವೇದದ ಪವಾಡ: ಕೊಪ್ಪಳದ ಅಗಸ್ತ್ಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆಯೇ 16mm ಕಿಡ್ನಿ ಸ್ಟೋನ್ ಮುಕ್ತಿ!
ಶಸ್ತ್ರಚಿಕಿತ್ಸೆ ಇಲ್ಲದೆ 16mm ಕಿಡ್ನಿ ಸ್ಟೋನ್ ಮುಕ್ತಿ: ಕೊಪ್ಪಳದ ಅಗಸ್ತ್ಯ ಆಯುರ್ವೇದ ಆಸ್ಪತ್ರೆ ಸಾಧನೆ
ಕೊಪ್ಪಳ: ಆಧುನಿಕ ವೈದ್ಯಕೀಯ ಲೋಕದಲ್ಲಿ ಶಸ್ತ್ರಚಿಕಿತ್ಸೆಯೇ ಅನಿವಾರ್ಯ ಎನ್ನುವಂತಹ ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಸಮಸ್ಯೆಯನ್ನು ಆಯುರ್ವೇದ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಗುಣಪಡಿಸುವಲ್ಲಿ ಕೊಪ್ಪಳದ ಅಗಸ್ತ್ಯ ಆಯುರ್ವೇದ ಆಸ್ಪತ್ರೆ ಮಹತ್ವದ ಸಾಧನೆ ಮಾಡಿದೆ.
ತಾಲೂಕಿನ ನಿವಾಸಿ ನಿಂಗರಾಜ ಎಂಬುವವರು ಕಳೆದ ಕೆಲವು ದಿನಗಳಿಂದ ತೀವ್ರವಾದ ಹೊಟ್ಟೆ ನೋವು ಮತ್ತು ಮೂತ್ರ ವಿಸರ್ಜನೆಯ ಸಮಸ್ಯೆಯಿಂದ ಬಳಲುತ್ತಿದ್ದರು. ಪರೀಕ್ಷೆಯ ಸಂದರ್ಭದಲ್ಲಿ ಅವರ ಮೂತ್ರನಾಳದ ಸಂಧಿಯಲ್ಲಿ (VUJ) 16 mm ಗಾತ್ರದ ದೊಡ್ಡ ಕಲ್ಲು ಹಾಗೂ ಕಿಡ್ನಿಯಲ್ಲಿ ಇತರೆ ಸಣ್ಣ ಕಲ್ಲುಗಳಿರುವುದು ಪತ್ತೆಯಾಗಿತ್ತು. ಇದನ್ನು ಕಂಡು ಶಸ್ತ್ರಚಿಕಿತ್ಸೆಯ ಭಯದಲ್ಲಿದ್ದ ರೋಗಿಗೆ ಆಯುರ್ವೇದ ಹೊಸ ಭರವಸೆ ನೀಡಿದೆ.
ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಲೋಕೇಶ್ ಮತ್ತು ಅವರ ತಂಡವು ಸುಶ್ರುತ ಸಂಹಿತೆಯ ಆಧಾರದ ಮೇಲೆ ಚಿಕಿತ್ಸೆ ಆರಂಭಿಸಿದರು. ರೋಗಿಗೆ ಆಯುರ್ವೇದದ ಪ್ರಾಚೀನ ಪದ್ಧತಿಯಾದ ಪಾನೀಯ ಕ್ಷಾರ, ಕಾಷ್ಟೌಷಧಿಗಳು ಹಾಗೂ ರಾಸೌಷಧಿಗಳನ್ನು ನೀಡಲಾಯಿತು. ಈ ಚಿಕಿತ್ಸೆಯು ಕೇವಲ ಎರಡೇ ದಿನಗಳಲ್ಲಿ ಅದ್ಭುತ ಫಲಿತಾಂಶ ನೀಡಿದೆ.
ಚಿಕಿತ್ಸೆ ಆರಂಭಿಸಿದ ಎರಡನೇ ದಿನದಂದು ಮೊದಲು 4 ರಿಂದ 5 mm ಗಾತ್ರದ ಕಲ್ಲು ಹೊರಬಂದಿತು. ತದನಂತರ ಕೆಲವೇ ಗಂಟೆಗಳ ಅಂತರದಲ್ಲಿ 10 ರಿಂದ 12 mm ಗಾತ್ರದ ಬೃಹತ್ ಕಲ್ಲು ಮೂತ್ರದ ಮೂಲಕ ನೈಸರ್ಗಿಕವಾಗಿ ಹೊರಬಂದಿದೆ. ಯಾವುದೇ ಕತ್ತರಿ ಪ್ರಯೋಗವಿಲ್ಲದೆ, ಅಡ್ಡಪರಿಣಾಮಗಳಿಲ್ಲದೆ ಇಷ್ಟು ದೊಡ್ಡ ಗಾತ್ರದ ಕಲ್ಲುಗಳು ಹೊರಬಂದಿರುವುದು ಆಯುರ್ವೇದದ ಶಕ್ತಿಯನ್ನು ಸಾಬೀತುಪಡಿಸಿದೆ.
ಸದ್ಯ ರೋಗಿ ನಿಂಗರಾಜ ಅವರು ಸಂಪೂರ್ಣ ಗುಣಮುಖರಾಗಿದ್ದು, ಶಸ್ತ್ರಚಿಕಿತ್ಸೆಯ ಭಯದಲ್ಲಿದ್ದ ತಮಗೆ ಆಯುರ್ವೇದ ಮರುಜೀವ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಡಾ. ಲೋಕೇಶ್ ಅವರ ಈ ವೈದ್ಯಕೀಯ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
