ಹುಬ್ಬಳ್ಳಿ: ”ದಂಪತಿಗಳ ಕುತ್ತಿಗೆಗೆ ಚಾಕು ಇಟ್ಟು ಸರ ಅಪಹರಿಸಿದ್ದ ‘ಅಂಟ ಆಕಾಶ್’ ಆ್ಯಂಡ್ ಗ್ಯಾಂಗ್ ಈಗ ಲಾಕಪ್ ಫಿಕ್ಸ್!”
ಧಾರವಾಡ: ರಸ್ತೆಯಲ್ಲಿ ಕಾರು ನಿಲ್ಲಿಸಿ ಮಾತನಾಡುತ್ತಿದ್ದ ದಂಪತಿಗಳಿಗೆ ಚಾಕು ತೋರಿಸಿ ಬೆದರಿಸಿ, ಚಿನ್ನದ ಸರ ಹಾಗೂ ನಗದು ದೋಚಿದ್ದ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಕಳೆದ ಫೆಬ್ರವರಿ 23 ರಂದು ದೇವರಗುಡಿಹಾಳ-ರೇವಾಡಿಹಾಳ ರಸ್ತೆಯ ಬಾಲಾ ಲೇಔಟ್ ಬಳಿ ದಂಪತಿಗಳನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಚಾಕು ತೋರಿಸಿ ₹1.60 ಲಕ್ಷ ಮೌಲ್ಯದ 35 ಗ್ರಾಂ ಚಿನ್ನದ ಸರ ಹಾಗೂ ₹4,500 ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ತಂಡದ ಕಾರ್ಯಾಚರಣೆ: ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಗುಂಜನ್ ಆರ್ಯ ಹಾಗೂ ಡಿಎಸ್ಪಿ ವಿನೋದ ಮುಕ್ತೇದಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಹುಬ್ಬಳ್ಳಿ ಗ್ರಾಮೀಣ ಡಿ.ಎಸ್.ಪಿ ಅವರ ನೇತೃತ್ವದಲ್ಲಿ, ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಂ.ಆರ್. ಚನ್ನಣ್ಣವರ್, ಪಿ.ಎಸ್.ಐ ಇಮ್ರಾನ್ ಪಠಾಣ್, ಎ.ಎಸ್.ಐ ಐ.ಎಸ್. ಬಗಾಡದ, ಸಿಬ್ಬಂದಿಗಳಾದ ಎನ್.ಎಮ್. ಹೊನ್ನಪ್ಪನವರ್, ನಂದೀಶ ವಟ್ರಾಳೆ, ಎ.ಎ. ಕಾಕರ್, ಹನುಮಂತ ಐಹೊಳೆ ಹಾಗೂ ತನಿಖಾ ತಂಡದ ಸದಸ್ಯರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಬಂಧಿತ ಆಕಾಶ್ @ ಅಂಟ ಆಕಾಶ್ ಮತ್ತು ರಾಜು @ ರಾಜಶೇಖರ ಎಂಬುವವರಿಂದ ಒಟ್ಟು ₹1.80 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ತಾರಿಹಾಳ ಕಳ್ಳತನ ಪ್ರಕರಣದ ಆರೋಪಿ ಗಣಪತಿ ಕುಡತಲಕರ ಎಂಬಾತನನ್ನೂ ಬಂಧಿಸಿ ₹1.49 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಪೊಲೀಸ್ ತಂಡದ ಈ ಯಶಸ್ವಿ ಕಾರ್ಯಾಚರಣೆಯನ್ನು ಎಸ್.ಪಿ ಗುಣಜನ್ ಆರ್ಯ ಅವರು ಶ್ಲಾಘಿಸಿದ್ದಾರೆ.
