ಅಣ್ಣಿಗೇರಿ ಸಂಘದಲ್ಲಿ ಅವಘಡ: ಶ್ಯಾಗೋಟಿಯ ಮಹಿಳೆಯ ದುರ್ಮರಣ

ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಸಹಕಾರಿ ಸಂಘದ ಹತ್ತಿ ಗೋಡೌನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೋರ್ವಳಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಸಂಭವಿಸಿದೆ.
ಮೃತ ಮಹಿಳೆಯನ್ನ ಗದಗ ಜಿಲ್ಲೆಯ ಶ್ಯಾಗೋಟಿ ಗ್ರಾಮದ ಸುಜಾತಾ ಹನಮಂತಪ್ಪ ಕಿರಬಣ್ಣನವರ ಎಂದು ಗುರುತಿಸಲಾಗಿದ್ದು, ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯತನದಿಂದ ದುರ್ಘಟನೆ ನಡೆದಿದೆ.
ಸಹಕಾರ ಸಂಘದ ಗೋಡೌನದಲ್ಲಿ ದಿನವೂ ಕಾರ್ಯನಿರ್ವಹಣೆ ಮಾಡುತ್ತಿದ್ದ ಸುಜಾತಾ, ಇಂದು ಕೂಡಾ ಎಂದಿನಂತೆ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಗೋಡೆ ಬಳಿ ನಿಂತಾಗ, ಟ್ರ್ಯಾಕ್ಟರ್ ಚಾಲಕ ಹಿಂದೆ ತೆಗೆದುಕೊಳ್ಳುವಾಗ, ಆಕೆಗೆ ಬಡಿಸಿದ್ದಾನೆ.
ಸುಜಾತಾಳಿಗೆ ಹಿಂದೆ ಗೋಡೆ ಇದ್ದ ಪರಿಣಾಮ, ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ. ಘಟನಾ ಸ್ಥಳಕ್ಕೆ ನವಲಗುಂದ ಸರ್ಕಲ್ ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿ ಹಾಗೂ ಅಣ್ಣಿಗೇರಿ ಠಾಣೆಯ ಸಬ್ ಇನ್ಸಪೆಕ್ಟರ್ ಲಾಲಸಾಬ ಜೂಲಕಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.