ಕೊನೆಯ ಆಟ ಮುಗಿಸಿದ ರಂಗನಟ-ನಿರ್ದೇಶಕ: ರಂಗಭೂಮಿಗೆ ಬರಸಿಡಿಲು
ಬಳ್ಳಾರಿ: ಅಭಿಜಾತ ರಂಗನಟ ನಿರ್ದೇಶಕ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಗಳಿ ಪಂಪಣ್ಣ ನಿಧನರಾಗಿದ್ದು ರಂಗಭೂಮಿ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ.
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹೋಗಲಿ ಗ್ರಾಮದ ಪ್ರಸಿದ್ಧ ರಂಗನಟ ಪಂಪಣ್ಣನವರು ಎಚ್ಚಮನಾಯಕ ಸುರಪುರದ ಸಿಂಹ ರಾಜಾ ವೆಂಕಟಪ್ಪ ನಾಯಕ ಕುರುಕ್ಷೇತ್ರ ರಕ್ತ ರಾತ್ರಿ ಸೇರಿದಂತೆ ಅನೇಕ ಪೌರಾಣಿಕ ಸಾಮಾಜಿಕ ನಾಟಕಗಳು ಪಾತ್ರಧಾರಿಯಾಗಿ ನಿರ್ದೇಶಕರಾಗಿ ಕರ್ನಾಟಕ ಜನಮಾನಸದಲ್ಲಿ ಉಳಿದುಕೊಂಡಿದ್ದವರು.
ರಂಗಜಂಗಮ ಪಂಪಣ್ಣನವರು ಹಾಗೂ ಮರಿಯಮ್ಮನಹಳ್ಳಿಯ ರಂಗ ಕಲಾವಿದೆ ಕೆ. ನಾಗರತ್ನಮ್ಮ ಬಹುತೇಕರ ಅತ್ಯಾಪ್ತ ವಲಯದಲ್ಲಿ ಇದ್ದವರು.
ಈ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ ಹಿರೇಮಠ ಕಲಾವಿದರನ್ನ ಸ್ಮರಿಸಿಕೊಂಡಿದ್ದು ಹೀಗೆ…
ಬಸರಕೋಡುಗೆ ಬಂದರೆ ಒಂದೆರಡು ದಿನ ಉಳಿದು ನಮ್ಮ ಕುಟುಂಬದ ಸದಸ್ಯರಂತೆ ನಮ್ಮನೆ ಹಿರಿಯರಂತೆ ಬದುಕಿದ ಪಂಪಣ್ಣ ನವರು ನಮಗೀಗ ನೆನಪು ಮಾತ್ರ. ತುಂಬಾ ಪ್ರಖರ ವಾಗ್ಮಿ, ಅಧ್ಯಯನಶೀಲ, ವೃತ್ತಿ ಬದ್ಧತೆ ಇರುವ ಕೆಲವೇ ಕೆಲವು ರಂಗ ಜಂಗಮರಲ್ಲಿ ಕೋಗಳಿ ಪಂಪಣ್ಣ ನವರು ಒಬ್ಬರು. ಅವರ ಮಾತುಗಾರಿಕೆ ಶಬ್ದಗಳ ಸ್ಪಷ್ಟ ಉಚ್ಚಾರಣೆ ಹಾವಭಾವ ಪಾತ್ರಗಳಿಗೆ ಜೀವ ತುಂಬುವಿಕೆ ಅತ್ಯದ್ಭುತ
ಇಂತಹ ಕಲಾವಿದ ನಮ್ಮ ನಡುವಿನಿಂದ ಬಾರದ ಲೋಕಕ್ಕೆ ಪಯಣ ಬೆಳೆಸಿ ನಮ್ಮೆಲ್ಲರಿಗೂ ಅಘಾತ ಮೂಡಿಸಿರುವುದು ಅರಗಿಸಿಕೊಳ್ಳಲಾಗದ ಸಂಗತಿ. ಅವರ ಕುಟುಂಬಕ್ಕೆ ಇಂತಹ ಅನರ್ಘ್ಯರತ್ನದ ಅಗಲಿಕೆ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.