ಅವಳಿನಗರದಲ್ಲಿ ಒಂದು ರಾತ್ರಿ- ಐದು ಅಪಘಾತ-ಹಲವರಿಗೆ ಗಾಯ…!

ಧಾರವಾಡ: ಕಳೆದ ರಾತ್ರಿಯಿಂದ ಬೆಳಗಿನವರೆಗೆ ಅವಳಿನಗರದಲ್ಲಿ ಒಟ್ಟು ಐದು ಅಪಘಾತಗಳು ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಯಾವ ಯಾವ ಸ್ಥಳದಲ್ಲಿ ಏನಾಗಿದೆ ಎಂಬುದರ ವಿವರ ಇಲ್ಲಿದೆ ನೋಡಿ..
ಧಾರವಾಡ ನಗರದ ರೀಗಲ್ ವೃತ್ತದಲ್ಲಿ ಆಟೋ ಹಾಗೂ ಇನ್ನೊವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಆಟೋ ಚಾಲಕನಿಗೆ ಅಲ್ಪ ಪ್ರಮಾಣದ ಗಾಯಗಳಾದ ಘಟನೆ ನಡೆದಿದೆ.
ಧಾರವಾಡದ ಮದಿಹಾಳದಿಂದ ಶಹರದತ್ತ ಬರುತ್ತಿದ್ದ ಆಟೋಗೆ ಇನ್ನೊವಾ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಮತ್ತೊಂದು ಕಾರು ಕೂಡಾ ಅಪಘಾತಪಡಿಸಿದೆ. ಇದರಿಂದ ಆಟೋದಲ್ಲಿದ್ದ ಚಾಲಕನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಧಾರವಾಡ ಸಿವಿಲ್ ಆಸ್ಪತ್ರೆಗೆ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.

ಧಾರವಾಡದ ಮರಾಠಾ ಕಾಲನಿಯಲ್ಲಿ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಲಾರಿ ಜಖಂಗೊಂಡು ವಿದ್ಯುತ್ ಕಂಬ ಮುರಿದ ಘಟನೆ ಸಂಭವಿಸಿದೆ.
ಸವದತ್ತಿಯಿಂದ ಬರುತ್ತಿದ್ದ ಲಾರಿಯು ಮರಾಠಾ ಕಾಲನಿಯ ಕ್ರಾಸ್ ನಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಲಾರಿಯಿಂದ ಜಿಗಿದ ಡ್ರೈವರ್, ತಾನೇ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದಾನೆ.
ಶಿವಾಜಿ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಹೆಸ್ಕಾಂಗೆ ಮಾಹಿತಿಯನ್ನ ನೀಡಿದ್ದಾರೆ.

ಧಾರವಾಡದ ವಿದ್ಯಾಗಿರಿಯ ಜೆಎಸ್ ಎಸ್ ಕಾಲೇಜ್ ಬಳಿಯಲ್ಲಿ ಪಾದಚಾರಿಯೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ.
ತಡರಾತ್ರಿ ರಸ್ತೆಯನ್ನ ದಾಟುವಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದರಿಂದ ಮಹಾಂತೇಶ ಎಂಬುವವರ ಕಾಲು ಮುರಿದಿದ್ದು, ಚಿಕಿತ್ಸೆಗಾಗಿ ಅವರನ್ನ ಧಾರವಾಡದ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಧಾರವಾಡದ ಸಪ್ತಾಪುರದ ಪ್ರದೇಶದಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಸಂಪೂರ್ಣ ಜಖಂಗೊಂಡಿದ್ದು, ವಿದ್ಯುತ್ ಕಂಬ ಬೀಳುವಂತಹ ಘಟನೆ ನಡೆದಿದೆ.
ಅಶೋಕ ಹೆಬ್ಬಾಳ್ಕರ ಎನ್ನುವವರಿಗೆ ಸೇರಿದ ಕಾರು ನೇರವಾಗಿ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ವಿದ್ಯುತ್ ಕಂಬ ಕೂಡಾ ಬೀಳುವ ಸ್ಥಿತಿಗೆ ಬಂದಿದೆ.
ಹುಬ್ಬಳ್ಳಿ: ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಹುಬ್ಬಳ್ಳಿಯ್ ಇಂಡಿ ಪಂಪ ಬಳಿಯಲ್ಲಿ ಘಟನೆ ನಡೆದಿದೆ. ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮುಖಕ್ಕೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಸಾರ್ವಜನಿಕರು ಕೂಡಲೇ ಗಾಯಾಳುವನ್ನ ಕಿಮ್ಸಗೆ ರವಾನೆ ಮಾಡಿದ್ದಾರೆ.