ಭೀಕರ ರಸ್ತೆ ಅಪಘಾತ: ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ವ್ಯಕ್ತಿಗಳು.. ಐವತ್ತು ಮೀಟರ್ ದೂರದಲ್ಲಿ ಪಲ್ಟಿಯಾದ ಕಾರು…!

ಹುಬ್ಬಳ್ಳಿ: ನಗರದಿಂದ ಕುಸುಗಲ್ ಗೆ ಹೋಗುವ ರಸ್ತೆಯಲ್ಲಿ ಬೈಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಹುಬ್ಬಳ್ಳಿಯಿಂದ ಹೊರಟಿದ್ದ ಕಳಕಪ್ಪ ತೋಪಲಕಟ್ಟಿ ಎಂಬುವವರಿಗೆ ಸೇರಿದ ಬೈಕಿಗೆ ಹೋಗುತ್ತಿದ್ದ ಮೂವರಿಗೆ ಇಂಡಿಕಾ ಕಾರೊಂದು ಡಿಕ್ಕಿ ಹೊಡೆದು, ಪರಾರಿಯಾಗಲು ಯತ್ನಿಸಿ, ಕುಸುಗಲ್ ರಸ್ತೆಯ ಶ್ರೀ ಸಿದ್ಧಾರೂಢ ಮಠದ ಬಳಿಯಲ್ಲಿ ನಿಯಂತ್ರಣ ತಪ್ಪಿ ಹೊಲದೊಳಗೆ ಹೋಗಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ.

ಘಟನೆಯಿಂದ ರಸ್ತೆಯುದ್ದಕ್ಕೂ ಮೂವರು ಚೆಲ್ಲಾಪಿಲ್ಲಿಯಾಗಿದ್ದು, ರಸ್ತೆಯಲ್ಲೇ ತೀವ್ರ ಥರದ ರಕ್ತಸ್ರಾವವಾಗಿತ್ತು. ತಕ್ಷಣವೇ ಅಂಬ್ಯುಲೆನ್ಸ್ ಮೂಲಕ ಕಿಮ್ಸಗೆ ಮೂವರನ್ನ ರವಾನೆ ಮಾಡಲಾಗಿದ್ದು, ಚಿಕಿತ್ಸೆ ಕೊಡಿಸುವ ಪ್ರಯತ್ನ ಮುಂದುವರೆದಿದೆ.

ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ವಾಹನಗಳನ್ನ ವಶಕ್ಕೆ ಪಡೆದಿದ್ದು, ಸಂಚಾರವನ್ನ ಸುಗಮಗೊಳಿಸಿದ್ದಾರೆ. ಕಾರು ಹೊಲದಲ್ಲಿದ್ದು, ಅದನ್ನೂ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮವನ್ನ ಜರುಗಿಸಲಿದ್ದಾರೆ.