ಯಮರಾಜನ ಸವಾರಿಯಾದ “ಚಿಗರಿ: “ನಜರ್ ಹಟೀ ದುರ್ಘಟನಾ ಘಟಿ”…!

ಹುಬ್ಬಳ್ಳಿ: ಅವಳಿನಗರದ ನಡುವಿನ ಆರ್ ಟಿಓ ಕಚೇರಿಯ ಬಳಿಯಲ್ಲಿ ಯಮದೂತನಂತೆ ಬಂದ ಬಿಆರ್ ಟಿಎಸ್ ಬಸ್ ಚಾಲಕ ಬೈಕಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ವ್ಯಕ್ತಿಯೋರ್ವನ ಸ್ಥಿತಿ ಚಿಂತಾಜನಕವಾಗಿದೆ.

ಬಿಆರ್ ಟಿಎಸ್ ಚಿಗರಿ ಬಸ್ ಚಾಲಕರು, ಕ್ರಾಸಿಂಗ್ ಇರುವ ಸ್ಥಳದಲ್ಲಿಯೂ ವೇಗವಾಗಿ ವಾಹನ ಚಲಾವಣೆಯನ್ನ ಬಿಡದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಅಮರನಗರದ ಮಹೇಶ ಹೊಸಮನಿ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಬೈಕ್ ಬಸ್ಸಿನ ಕೆಳಗಡೆ ಹೋಗುವಂತೆ ಬಸ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹೇಶ ಅವರನ್ನ ಧಾರವಾಡದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಘಟನೆ ನಡೆಯುತ್ತಿದ್ದ ಹಾಗೇ ಬಿಆರ್ ಟಿಎಸ್ ಬಸ್ ಗಳನ್ನ ಸಾರ್ವಜನಿಕರು ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಆರ್ ಟಿಎಸ್ ಅವಘಡಗಳಿಗೆ ಕೊನೆಯಿಲ್ಲದಂತಾಗಿದ್ದು, ಕ್ರಾಸಿಂಗ್ ನಲ್ಲಿ ಸಂಚರಿಸುವ ಜನರ ಪ್ರಾಣವನ್ನ ಚಿಗರಿ ಮೂಲಕ ಪಡೆಯುವಂತಹ ಘಟನೆಗಳು ನಡೆಯುತ್ತಿರುವುದು ಅಸಹ್ಯ ಪಡುವ ವಿಚಾರವಾಗಿದೆ.