ಪರಿಹಾರ-ಬೆಳೆಹಾನಿ- ಶಂಕರ ಪಾಟೀಲಮುನೇನಕೊಪ್ಪ ಇಂದೇನು ಮಾಡಿದ್ರು ಗೊತ್ತಾ..?
1 min readಧಾರವಾಡ: ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಗ್ರಾಮದ ಶ್ರೀಕಾಂತರಡ್ಡಿ ಇನಾಮತಿ ಹಾಗೂ ದೇವೆಂದ್ರಪ್ಪ ಯಮನಪ್ಪ ಮಾದರ ಪ್ರವಾಹಕ್ಕೆ ಸಿಲುಕಿ ಮೃತರಾಗಿದ್ದವರ ಮನೆಗಿಂದು ಶಾಸಕ ಶಂಕರ ಪಾಟೀಲಮುನೇನಕೊಪ್ಪ ತೆರಳಿ, ಕುಟುಂಬದವರಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿ ಸಾಂತ್ವನ ಹೇಳಿದರು.
ಕೆಲವು ದಿನಗಳಿಂದ ನಾನು ಅನಿವಾರ್ಯವಾಗಿ ಮನೆಯಲ್ಲಿ ಇರಬೇಕಾಯಿತು. ಹಾಗಾಗಿ ಕೆಲ ದಿನಗಳವರೆಗೆ ಪರಿಹಾರ ವಿತರಣೆ ವಿಳಂಬವಾಯಿತು. ಎಂದ ಶಾಸಕರು, ತಮ್ಮ ಸಹೋದರ ಇನ್ನಿಲ್ಲವಾದ ವಿಷಯವನ್ನ ಬಹಿರಂಗವಾಗಿ ಹೇಳದೇ, ಆ ನೋವನ್ನ ತಾವೇ ನುಂಗಿಕೊಂಡರು.
ಎರಡು ಕುಟುಂಬಗಳಿಗೆ ಸಾಂತ್ವನ ಹೇಳಿದ ನಂತರ, ಪ್ರತಿವರ್ಷ ಬೆಣ್ಣೆಹಳ್ಳದ ಪ್ರವಾಹದಿಂದ ಈ ಭಾಗದ ರೈತರ ಹೊಲಗಳಿಗೆ ಮತ್ತು ರೈತರು ಬೆಳೆದ ಬೆಳೆಗಳಿಗೆ ಅಗಾಧವಾದ ಹಾನಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆಯನ್ನು ರೂಪಿಸುವ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲರವರೊಂದಿಗೆ ಶಾಸಕರು ಚರ್ಚಿಸಿದರು. ಅಷ್ಟೇ ಅಲ್ಲ, ಇದೇ ಸಂದರ್ಭದಲ್ಲಿ ಕಳೆದ ವಾರದಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರ ಬೆಳೆಗಳು ಹಾನಿಗೊಳಗಾಗಿದ್ದು, ಜಿಲ್ಲಾಧಿಕಾರಿಗಳೊಂದಿಗೆ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಹಾನಿಯನ್ನು ವೀಕ್ಷಿಸಿದರು.
ತಹಶೀಲ್ದಾರ ನವೀನ ಹುಲ್ಲೂರ, ಪ್ರಕಾಶ ನಾಶಿ , ಪಿ.ಎಚ್.ನೀರಲಕೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.