ಬೆಣ್ಣೆಹಳ್ಳ-ತುಪರಿಹಳ್ಳ: ಧಾರವಾಡ ಜಿಲ್ಲೆ ಸಂಸದ, ಶಾಸಕರು ರಾಜಧಾನಿಯಲ್ಲಿ ಮಾಡುತ್ತಿರುವುದೇನು..?
ಬೆಂಗಳೂರು: ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹಾಗೂ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿಯವರ ಮಹತ್ವಾಕಾಂಕ್ಷೆಯ ಯೋಜನೆಗೆ ರೂಪರೇಷೆ ಸಿದ್ಧಗೊಂಡಿದ್ದು, ದಶಕದ ಕನಸು ನನಸಾಗಲು ಇನ್ನೇನು ಹೆಚ್ಚು ದಿನಗಳು ಬೇಕಾಗಿಲ್ಲವೆನಿಸುವಂತಹ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಿತು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಸಂಬಂಧಿ ಸುರೇಶ ಅಂಗಡಿಯವರ ಬೆಳಗಾವಿ ನಿವಾಸದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರಿಂದ ಬೆಂಗಳೂರಿನ ಕರ್ನಾಟಕದ ನೀರಾವರಿ ನಿಗಮದ ಕಚೇರಿಯಲ್ಲಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ವಿಶೇಷ ಸಭೆ ನಡೆಯಿತು.
ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳಗಳ ಪ್ರವಾಹ ನಿಯಂತ್ರಣ ಹಾಗೂ ಪ್ರವಾಹದ ನೀರಿನ ಬಳಕೆ ಕುರಿತು ವಿವರವಾದ ಯೋಜನಾ ವರದಿ ತಯಾರಿಕೆಗೆ ಸಂಬಂಧಪಟ್ಟ ಹಾಗೇ ಸಭೆಯನ್ನ ನಡೆಸಲಾಯಿತು.
ತುಪ್ಪರಿಹಳ್ಳ ಮತ್ತು ಬೆಣ್ಣೆಹಳ್ಳದಿಂದ ಪ್ರತಿವರ್ಷ ಆಗುತ್ತಿರುವ ತೊಂದರೆಗಳ ಜೊತೆಗೆ ಇದಕ್ಕೆ ಪೂರಕವಾದ ಮಾಹಿತಿಯನ್ನ ಅಧಿಕಾರಿಗಳು ಸಚಿವರಿಗೆ ನೀಡಿದರು.
ಧಾರವಾಡ ಜಿಲ್ಲೆಯಲ್ಲಿ ಈ ಎರಡು ಹಳ್ಳಗಳಿಂದ ಪ್ರತಿವರ್ಷ ಹಲವರು ಪ್ರಾಣ ಕಳೆದುಕೊಳ್ಳುತ್ತಾರೆ. ದನಕರುಗಳು ನೀರಲ್ಲಿ ಕೊಚ್ಚಿ ಹೋಗುತ್ತವೆ. ಹೀಗಾಗಿ ಇದಕ್ಕೊಂದು ಶಾಶ್ವತ ಪರಿಹಾರದ ಕನಸು ಕಂಡಿದ್ದು ಶಾಸಕ ಶಂಕರ ಪಾಟೀಲಮುನೇನಕೊಪ್ಪ. ಇದೀಗ ಕಾಲ ಕೂಡಿ ಬಂದ ಹಾಗಾಗಿದೆ. ಸಂಸದ ಪ್ರಲ್ಹಾದ ಜೋಶಿ ಈ ಯೋಜನೆಯನ್ನ ಜಾರಿಗೆ ತರಲು ಅವಿರತವಾಗಿ ಶ್ರಮ ಪಡುತ್ತಿರುವುದು, ಜಗದೀಶ ಶೆಟ್ಟರ, ಅಮೃತ ದೇಸಾಯಿ ನಿರಂತರವಾಗಿ ಫಾಲೋ ಅಪ್ ಮಾಡುತ್ತಿದ್ದರು.
ಇಂದು ನಡೆದ ಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ ಕೂಡಾ ಉಪಸ್ಥಿತರಿದ್ದರು.