ಹುಬ್ಬಳ್ಳಿ: ಹೈದರಾಬಾದ್ ಬಸ್ ಸಂಚಾರ ಪುನರಾರಂಭ
ಹುಬ್ಬಳ್ಳಿ: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಹೈದರಾಬಾದ್ ಗೆ ಸಾರಿಗೆ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಸರ್ಕಾರದ ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಬಸ್ಸುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.ಈ ಬಸ್ಸುಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಹಾಗೂ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಕರಸಾಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 1ಎಸಿ ಸ್ಲೀಪರ್(ರಾತ್ರಿ 8-00ಕ್ಕೆ), 1ನಾನ್ ಎಸಿ ಸ್ಲೀಪರ್(ಸಂಜೆ 7-00ಕ್ಕೆ), 1ರಾಜಹಂಸ( ಸಂಜೆ 7-30ಕ್ಕೆ) ಹಾಗೂ 2 ವೇಗದೂತ ಬಸ್ಸುಗಳ (ಬೆಳಿಗ್ಗೆ 7-00 ಮತ್ತು 8-00ಕ್ಕೆ) ಸಂಚಾರವನ್ನು ಆರಂಭಿಸಲಾಗಿದೆ.
ಬೆಳಿಗ್ಗೆ 7-00ಗಂಟೆಗೆ ಹೊರಡುವ ವೇಗದೂತ ಮತ್ತು ಎಲ್ಲಾ ಐಶಾರಾಮಿ ಬಸ್ಸುಗಳು ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು, ಮೆಹಬೂಬ ನಗರ, ಝಡ್ ಚರ್ಲಾ ಮಾರ್ಗವಾಗಿ ಸಂಚರಿಸುತ್ತವೆ.
ಬೆಳಿಗ್ಗೆ 8-00ಗಂಟೆಗೆ ಹೊರಡುವ ವೇಗದೂತ ಬಸ್ಸು ನವಲಗುಂದ, ರೋಣ, ಗಜೇಂದ್ರಗಡ, ಕುಷ್ಟಗಿ, ಸಿಂಧನೂರು, ರಾಯಚೂರು, ಮೆಹಬೂಬ್ ನಗರ, ಝಡ್ ಚರ್ಲಾ ಮಾರ್ಗವಾಗಿ ಸಂಚರಿಸುತ್ತದೆ.
ಕೋವಿಡ್-19 ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲ ಪ್ರಯಾಣಿಕರು ಮಾಸ್ಕ್ ಧರಿಸುವದು ಕಡ್ಡಾಯವಾಗಿರುತ್ತದೆ. ಬಸ್ಸಿನಲ್ಲಿ ಬ್ಲಾಂಕೆಟ್ ಮತ್ತು ನೀರಿನ ಬಾಟಲಿಗಳನ್ನು ನೀಡುವುದಿಲ್ಲ. ಎಲ್ಲಾ ಬಸ್ಸುಗಳಿಗೆ ಆನ್ ಲೈನ್ ಮತ್ತು ಮುಂಗಡ ಬುಕ್ಕಿಂಗ್ ಕೌಂಟರುಗಳ ಮೂಲಕ ಆಸನಗಳನ್ನು ಕಾಯ್ದಿರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.
ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ವೋಲ್ವೋ ಬಸ್ ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.