ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಸದ್ದಿಲ್ಲದೇ ಸಿದ್ಧತೆ: ಉತ್ಸುಕರಾಗಿರುವ ಶಿಕ್ಷಕರು
1 min readಬೆಂಗಳೂರು: ರಾಜ್ಯದಲ್ಲಿ ಕಳೆದ ಏಳು ತಿಂಗಳಿಂದ ಬಂದ್ ಆಗಿರುವ ಶಾಲೆಗಳನ್ನ ಆರಂಭಿಸಲು ಸರಕಾರ ಸದ್ದಿಲ್ಲದೇ ಸಿದ್ಧತೆಯನ್ನ ಆರಂಭಿಸಿದ್ದು, ಶಿಕ್ಷಕರು ಕೂಡಾ ಶಾಲೆಗಳಲ್ಲೇ ಪಾಠ ಮಾಡಲು ಉತ್ಸುಕರಾಗಿದ್ದಾರೆ.
ಕೇಂದ್ರ ಸರಕಾರದ ಸೂಚನೆಯ ಪ್ರಕಾರ ನವೆಂಬರ್ 30ರ ವರೆಗೆ ಶಾಲೆಗಳನ್ನ ಆರಂಭಿಸುವಂತಿಲ್ಲ. ಹಾಗಾಗಿ, ಡಿಸೆಂಬರ್ ಮೊದಲ ವಾರದಲ್ಲಿ ಶಾಲೆಗಳನ್ನ ಆರಂಭಿಸಲು ಸಿದ್ಧತೆಗಳು ಆರಂಭಗೊಂಡಿವೆ. ಈಗಾಗಲೇ, ಹಿಮಾಚಲಪ್ರದೇಶ, ಅಸ್ಸಾಂ, ಆಂದ್ರಪ್ರದೇಶಗಳಲ್ಲಿ ಶಾಲೆಗಳನ್ನ ಆರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಎಸ್.ಡಿಎಂಸಿ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪೋಷಕರು ಕೊರೋನಾ ಸೋಂಕಿನ ಹೆಚ್ಚಳದಿಂದ ಶಾಲೆಗಳ ಆರಂಭಕ್ಕೆ ಉತ್ಸಾಹ ತೋರಿಸಿರಲಿಲ್ಲ. ಆದರೆ, ಈಗ ಶೇಕಡಾ 50ರಷ್ಟು ಪೋಷಕರು, ಶಾಲೆಗಳನ್ನ ಆರಂಭಿಸಲು ಉತ್ಸುಕರಾಗಿದ್ದಾರೆ. ತಜ್ಞರ ಸಮಿತಿ ಕೂಡಾ ಮುನ್ನಚ್ಚೆರಿಕೆ ಕ್ರಮಗಳನ್ನ ತೆಗೆದುಕೊಂಡು ಶಾಲೆ ಆರಂಭಿಸುವಂತೆ ಸೂಚಿಸಿದೆ.
ಶಿಕ್ಷಣ ಸಚಿವ ಸುರೇಶಕುಮಾರ ನವೆಂಬರ್ 2ರಂದು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ಹಮ್ಮಿಕೊಂಡಿದ್ದರು. ಆದರೆ, ನೆಟ್ ವರ್ಕ್ ಸಮಸ್ಯೆಯಿಂದ ಅದು ಸಾಧ್ಯವಾಗಿಲ್ಲ. ಹೀಗಾಗಿ ನಾಳೆಯಿಂದ ಮೂರು ದಿನಗಳ ಕಾಲ ಸಭೆಯನ್ನ ನಡೆಸಿ, ತೀರ್ಮಾನಗಳನ್ನ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಸರಕಾರಿ ಶಾಲೆಯ ಶಿಕ್ಷಕರು ಕೂಡಾ ಸರದಿಯ ಮೇಲೆ ಕಾರ್ಯನಿರ್ವಹಣೆ ಮಾಡಲು ಉತ್ಸಾಹ ತೋರುತ್ತಿದ್ದಾರೆ. ಈ ಹಿಂದೆ ವಿದ್ಯಾಗಮ ನಡೆಯುತ್ತಿದ್ದಾಗಲೇ ಕೆಲವರು ಶಾಲೆಯಲ್ಲೇ ಪಾಳಿ ಪ್ರಕಾರ ಮಾಡುವ ಇಚ್ಚೆಯನ್ನ ವ್ಯಕ್ತಪಡಿಸಿದ್ದರು. ಎಲ್ಲವಕ್ಕೂ ಸಮಯ ಕೂಡಿ ಬಂದಿರುವುದರಿಂದ ಶಾಲೆ ಆರಂಭಕ್ಕೆ ಅಧಿಕೃತ ಒತ್ತಲು ಸರಕಾರ ಸಿದ್ಧವಾಗಿದೆ.