ಹುಬ್ಬಳ್ಳಿಯಲ್ಲಿ ಬಸ್ ಆರಂಭ: ನಿರಮ್ಮಳವಾಗಿ ನೀವೂ ಹೋಗಬಹುದು..!

ಹುಬ್ಬಳ್ಳಿ: ತಮ್ಮ ಬೇಡಿಕೆ ಈಡೇರಿಸುವಂತೆ ಕೆಎಸ್ಸಾರ್ಟಿಸಿ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಯಾವುದೇ ರೀತಿಯ ಸ್ಪಂದನೆ ನೀಡದೇ ಇರುವುದರಿಂದ ಇಂದು ಬೆಳಗಿನಿಂದ ಚಾಲಕ, ನಿರ್ವಾಹಕರು ಬಸ್ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದರು. ಆದರೆ, ಅಧಿಕಾರಿಗಳು ಮಧ್ಯಸ್ತಿಕೆ ವಹಿಸಿ ಬಸ್ ಸಂಚಾರ ಮರಳಿ ಆರಂಭಿಸಿದ್ದಾರೆ.
ಹಳೇ ಬಸ್ ನಿಲ್ದಾಣದ ಹೊರಗಡೆಯಿಂದ ಪ್ರತಿಭಟನೆ ಮಾಡುತ್ತಿದ್ದ ನೌಕರರು, ಸಂಚಾರವನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು. ಹೊರಗಡೆಯಿದ್ದ ಬಸ್ಸಗಳನ್ನೂ ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಹೊಸೂರು ಸರ್ಕಲ್, ಐಟಿ ಪಾರ್ಕ ಬಳಿಯೂ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಎಲ್ಲ ಬಸ್ ಗಳು ಬಂದಾಗಿದ್ದವು. ಸಾರಿಗೆ ನೌಕರರನ್ನ ಸರಕಾರಿ ನೌಕರರು ಎಂದು ಪರಿಗಣಿಸಬೇಕು. ಅವರನ್ನೂ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ಹೋರಾಟ ನಡೆಯುತ್ತಿದೆ.
ರಾಜ್ಯ ಸರಕಾರ ಕಳೆದ ಎರಡು ದಿನಗಳಿಂದಲೂ ಯಾವುದೇ ರೀತಿಯ ಪ್ರತಿಕ್ರಿಯೆ ಕೊಡದ ಹಿನ್ನೆಲೆಯಲ್ಲಿ ಅವಳಿನಗರದಲ್ಲಿಯೂ ಬಸ್ ಸಂಚಾರ ಮಾಡಿ, ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದರು. ಆದರೆ, ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಚಾಲಕ ನಿರ್ವಾಹಕರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬಸ್ ಸಂಚಾರ ಮತ್ತೆ ಎಂದಿನಂತೆ ಆರಂಭಗೊಂಡಿದೆ.