ಮಹಿಳೆ ವಿಚಾರ: ಪಿಎಸ್ಐ ಕಾರಿಗೆ ಬೆಂಕಿಯಿಟ್ಟು ಪೊಲೀಸ್ ಕಾನ್ಸ್ಟೇಬಲ್ ಪರಾರಿ…
ಕಲಬುರಗಿ: ಪೊಲೀಸ್ ಠಾಣೆಯಲ್ಲಿ ಗಲಾಟೆ ನಡೆಸಿದ ಬಳಿಕ ಪಿಎಸ್ಐ ಅವರ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ ಆರೋಪ ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಕೇಳಿಬಂದಿದೆ.
ಚಿಂಚೋಳಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ರಾಜಶೇಖರ ವರನಾಳ್ ಆರೋಪಿಯಾಗಿದ್ದು, ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳು ದಾಖಲಾಗಿವೆ.

ಈ ಹಿಂದೆ ಮಹಾಗಾಂವ ಠಾಣೆಯಲ್ಲಿ ಸುಮಾರು ನಾಲ್ಕು ವರ್ಷ ಸೇವೆ ಸಲ್ಲಿಸಿದ್ದ ರಾಜಶೇಖರ, ಮಹಿಳೆಯೊಬ್ಬರ ವಿಚಾರವಾಗಿ ಠಾಣೆಯಲ್ಲಿ ಗಲಾಟೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಪಿಎಸ್ಐ ಬಸವರಾಜ್ ಚಿತ್ತಕೋಟೆ ಅವರ ಕಾರಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಇದಕ್ಕೂ ಮುನ್ನ ಮಹಿಳೆಯೊಬ್ಬರೊಂದಿಗೆ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಆಕೆಯ ಪತಿ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ. ಅಲ್ಲದೆ, ಕಾನ್ಸ್ಟೇಬಲ್ ಮಹಿಳೆಯೊಬ್ಬರ ಮೇಲೆ ನಡುಬೀದಿಯಲ್ಲಿ ಹಲ್ಲೆ ನಡೆಸಿದ್ದಾನೆಂಬ ಆರೋಪವೂ ಕೇಳಿಬಂದಿದೆ.
ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಠಾಣೆಯಲ್ಲಿ ಗಲಾಟೆ ನಡೆಸಿ ಅಧಿಕಾರಿಯ ವಾಹನಕ್ಕೆ ಬೆಂಕಿ ಹಚ್ಚಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಪೊಲೀಸ್ ಇಲಾಖೆ ಮುಂದಿನ ಕ್ರಮ ಕೈಗೊಳ್ಳಬೇಕಿದೆ.
