ಧಾರವಾಡ: ಪ್ರೀತಿ.. ಪ್ರೇಮ.. ಮದುವೆ.. ವಿಚ್ಛೇದನ ಪ್ರಕರಣ ಮತ್ತೂ ಹಾಫ್ ಮರ್ಡರ್… ನಡು ಮಧ್ಯಾಹ್ನವೇ ಘಟನೆ..
ಧಾರವಾಡ ಎಸ್ಬಿಐ ಬಳಿ ವಿಚ್ಛೇದನ ಪ್ರಕರಣದ ವ್ಯಕ್ತಿಗೆ ಮಾರಕಾಸ್ತ್ರಗಳಿಂದ ಹಲ್ಲೆ: ಕಿಮ್ಸ್ಗೆ ದಾಖಲು
ಧಾರವಾಡ: ವಿಚ್ಛೇದನ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ಸಾಗುತ್ತಿದ್ದ ವ್ಯಕ್ತಿಯ ಮೇಲೆ ಸುಮಾರು ಆರು ಜನರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಧಾರವಾಡ ನಗರದ ಎಸ್ಬಿಐ ಮೇನ್ ಬ್ರ್ಯಾಂಚ್ ಬಳಿ ನಡೆದಿದೆ.
ಧಾರವಾಡದ ಮೆಹಬೂಬನಗರ ನಿವಾಸಿ ಶಶಿಧರ್ ಶಿರಾಳೆ ಹಲ್ಲೆಗೊಳಗಾದ ವ್ಯಕ್ತಿ. ತಲೆ ಹಾಗೂ ಕೈಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಶಶಿಧರ್ ಹಾಗೂ ಅವರ ಪತ್ನಿ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದ್ದು, ಮದುವೆಯ ಬಳಿಕ ಪತ್ನಿ ವಿಚ್ಛೇದನಕ್ಕಾಗಿ ಧಾರವಾಡ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಶಶಿಧರ್ ವಿಚ್ಛೇದನ ನೀಡಲು ನಿರಾಕರಿಸಿದ್ದರು ಎಂದು ಅವರ ತಂದೆ-ತಾಯಿ ತಿಳಿಸಿದ್ದಾರೆ. ಇದೇ ವಿಚಾರವಾಗಿ ಹಲ್ಲೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಘಟನೆ ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
