Karnataka Voice

Latest Kannada News

ಧಾರವಾಡ: ಟ್ರಕ್ ತಪ್ಪಿಸಲು ಹೋಗಿ ಎರ್ಟಿಗಾ ಕಾರು ಪಲ್ಟಿ- ಮೂವರ ದುರ್ಮರಣ, ಮೂವರ ಸ್ಥಿತಿ ಗಂಭೀರ…

Spread the love

ಟ್ರಕ್ ತಪ್ಪಿಸಲು ಹೋಗಿ ಕಾರು ಪಲ್ಟಿ; ಮೂವರು ಸ್ಥಳದಲ್ಲೇ ಸಾವು

ಧಾರವಾಡ: ಮುಂದೆ ಸಾಗುತ್ತಿದ್ದ ಟ್ರಕ್‌ವೊಂದನ್ನು ತಪ್ಪಿಸಲು ಹೋಗಿ ಎರ್ಟಿಗಾ ಕಾರು ಡಿವೈಡರ್ ಮೇಲೆ ಹತ್ತಿ ರಸ್ತೆಯಲ್ಲೇ ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ರಸ್ತೆ ಅಪಘಾತ ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಸುಕಿನ ಜಾವ ಸಂಭವಿಸಿದೆ.

ವೆಂಕಟಾಪುರ ಗ್ರಾಮದ ಹದ್ದಿಯಲ್ಲಿರುವ ಬೆಳಗಾವಿ–ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆಪ್ಟೆಂಬರ್ 1ರಂದು ನಸುಕಿನ ಜಾವ ಸುಮಾರು 3.20ರ ವೇಳೆಗೆ ಈ ದುರ್ಘಟನೆ ನಡೆದಿದೆ.

KA-04-MR-9948 ಸಂಖ್ಯೆಯ ಎರ್ಟಿಗಾ ಕಾರು ಬೆಳಗಾವಿಯಿಂದ ಧಾರವಾಡದತ್ತ ಬರುತ್ತಿತ್ತು. ಈ ವೇಳೆ ಕಾರಿನ ಮುಂದೆ ಸಾಗುತ್ತಿದ್ದ ಟ್ರಕ್‌ವೊಂದನ್ನು ತಪ್ಪಿಸಲು ಚಾಲಕ ಯತ್ನಿಸಿದ್ದು, ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕದ ಮೇಲೆ ಹತ್ತಿ ಬಳಿಕ ರಸ್ತೆಯಲ್ಲೇ ಪಲ್ಟಿಯಾಗಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಮಂಜುನಾಥ (29), ವಿನಾಯಕ (27) ಹಾಗೂ ಬಸವರಾಜ (33) ಎಂಬ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಹರಿಹರ ಮೂಲದವರಾಗಿದ್ದು, ಧಾರವಾಡದಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಕಾರು ಚಾಲಕ ಸೇರಿದಂತೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುಗಳನ್ನ ಹೊಸಯಲ್ಲಾಪುರದ ಬಸನಗೌಡ ಯಲ್ಲಪ್ಪಗೌಡ ಪಾಟೀಲ (26), ದಾವಣಗೆರೆಯ ಅಭಿಷೇಕ್ ಮಂಜಪ್ಪ ಕೆ.ಆರ್. (30) ಹಾಗೂ ಅಜಯ್ ಮಂಜಪ್ಪ ಕೆ.ಆರ್. (26) ಎಂದು ಗುರುತಿಸಲಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಗರಗ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರೆಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed