Big Breaking: ಧಾರವಾಡ ಹುಬ್ಬಳ್ಳಿ ಮರಳು ಮಾಫಿಯಾ- ಹೆಡ್ಕಾನ್ಸಟೇಬಲ್, ಹೋಂ ಗಾರ್ಡ್ ಬಂಧನ…
ಮರಳು ಲಾರಿ ಬಿಡಲು ₹30 ಸಾವಿರ ಲಂಚ ಆರೋಪ; ಹೆಡ್ಕಾನ್ಸ್ಟೇಬಲ್-ಹೋಮ್ಗಾರ್ಡ್ ಲೋಕಾಯುಕ್ತ ಬಲೆಗೆ
ಧಾರವಾಡ: ಮರಳು ಸಾಗಿಸುತ್ತಿದ್ದ ಲಾರಿಯನ್ನು ಹುಬ್ಬಳ್ಳಿ–ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ಯಾವುದೇ ತೊಂದರೆಯಿಲ್ಲದೆ ಸಂಚರಿಸಲು ಬಿಡಲು ಲಾರಿ ಚಾಲಕನಿಂದ ₹30 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ಪೊಲೀಸ್ ಹೆಡ್ಕಾನ್ಸ್ಟೇಬಲ್ ಹಾಗೂ ಓರ್ವ ಹೋಮ್ಗಾರ್ಡ್ನನ್ನು ಧಾರವಾಡ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಬಂಧಿತರನ್ನು ಧಾರವಾಡ ನಗರ ಠಾಣೆಯ ಹೆಡ್ಕಾನ್ಸ್ಟೇಬಲ್ ಹಸನ್ಸಾಬ ನದಾಫ್ ಹಾಗೂ ಹೋಮ್ಗಾರ್ಡ್ ಇಕ್ಬಾಲ್ ನದಾಫ್ ಎಂದು ಗುರುತಿಸಲಾಗಿದೆ.
ಕೊಪ್ಪಳ ಮೂಲದ ಲಾರಿ ಚಾಲಕ ಹನುಮಂತ ಎಂಬುವವರು ಮರಳು ಸಾಗಿಸುತ್ತಿದ್ದ ಲಾರಿಯನ್ನು ಅವಳಿ ನಗರ ವ್ಯಾಪ್ತಿಯಲ್ಲಿ ಬಿಡಲು ₹30 ಸಾವಿರ ನೀಡಬೇಕು ಎಂದು ಆರೋಪಿಗಳು ಒತ್ತಾಯಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಣವನ್ನು ಫೋನ್ಪೇ ಮೂಲಕ ಪಾವತಿಸಲಾಗಿತ್ತು ಎಂದು ವರದಿಯಾಗಿದೆ. ಬಳಿಕ ಲಾರಿ ಚಾಲಕ ಧಾರವಾಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಹಣದ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಆರೋಪಿಗಳ ಮೊಬೈಲ್ ಫೋನ್ಗಳನ್ನು ಸಹ ವಶಕ್ಕೆ ಪಡೆದು, ಹಣದ ವಹಿವಾಟು ಹಾಗೂ ಲಾರಿ ಚಾಲಕನೊಂದಿಗೆ ನಡೆದ ಸಂವಹನದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ? ಇದೇ ರೀತಿಯಲ್ಲಿ ಬೇರೆ ಲಾರಿ ಚಾಲಕರಿಂದಲೂ ಹಣ ಪಡೆದಿದ್ದಾರೆಯೇ? ಎಂಬುದರ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಲಂಚ ಸ್ವೀಕಾರದ ಆರೋಪದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಧಾರವಾಡ ಪೊಲೀಸ್ ವಲಯದಲ್ಲಿ ಇದೀಗ ಚರ್ಚೆಗೆ ಗ್ರಾಸವಾಗಿದೆ.
