XUV 300 ಬ್ಲಾಸ್ಟ್ ಮಾಡಿ ಹತ್ಯೆಗೆ “ಫಿಲ್ಮಿ ಪ್ಲಾನ್”- ರಿವರ್ಸ್ ಇನ್ವೇಸ್ಟಿಗೇಶನ್ ಮಾಡಿ “ಗೆದ್ದ ಪೊಲೀಸರು”…
ಜಿಲೆಟಿನ್ ಕಡ್ಡಿ ಬಳಸಿ SUV300 ಬ್ಲಾಸ್ಟ್: ಪ್ರೀ-ಪ್ಲ್ಯಾನ್ಡ್ ಕೊಲೆ ಯತ್ನ ಬಯಲು
ಬಾಗಲಕೋಟೆ: ಜಿಲ್ಲೆಯ ಹಿಪ್ಪರಗಿ ಬಳಿ ಜುಲೈ 25ರಂದು ರಾತ್ರಿ ನಡೆದಿದ್ದ SUV300 ಕಾರು ಸ್ಫೋಟ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಆರಂಭದಲ್ಲಿ ತಾಂತ್ರಿಕ ದೋಷದಿಂದ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದ ಪ್ರಕರಣವನ್ನು ಸುಮಾರು 20 ದಿನಗಳ ಕಾಲ ತನಿಖೆ ನಡೆಸಿದ ಪೊಲೀಸರು, ಇದು ಪೂರ್ವಯೋಜಿತ ಕೊಲೆ ಯತ್ನ ಎಂಬುದನ್ನು ಬಯಲಿಗೆಳೆದಿದ್ದಾರೆ.
ಜುಲೈ 25ರಂದು ರಾತ್ರಿ 10.45ರ ಸುಮಾರಿಗೆ ಹನುಮಂತ ಅಥಣಿ ಎಂಬುವರಿಗೆ ಸೇರಿದ ಮಹೀಂದ್ರಾ SUV300 ಕಾರಿನಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದರೂ, ಕಾರಿನ ಮಾಲೀಕ ಹನುಮಂತ ಅವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಪೊಲೀಸರ ತನಿಖೆಯಲ್ಲಿ ಕಾರಿನ ಟೈರ್ ಬಳಿ ಜಿಲೆಟಿನ್ ಕಡ್ಡಿಗಳನ್ನು ಇಟ್ಟು, ಕೆಪೆಸಿಟರ್ ಹಾಗೂ ಡಿಟೋನೇಟರ್ ಮೂಲಕ ಸ್ಫೋಟ ನಡೆಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
₹40 ಲಕ್ಷ ಸಾಲವೇ ಕೊಲೆ ಸ್ಕೆಚ್ಗೆ ಕಾರಣ?: ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ಜಲ್ಲಿ ಅವರ ದೊಡ್ಡಪ್ಪ ನಿಂಗಪ್ಪ ಅವರು ಹನುಮಂತ ಅವರ ಬಳಿ ₹40 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಐದು ಎಕರೆ ಜಮೀನು ಹನುಮಂತ ಅವರ ಪಾಲಾಗಿತ್ತು. ಜಮೀನು ವಾಪಸ್ ಪಡೆಯುವ ವಿಚಾರದಲ್ಲಿ ಉಂಟಾದ ವಿವಾದವೇ ಕೊಲೆ ಯತ್ನಕ್ಕೆ ಕಾರಣ ಎನ್ನಲಾಗಿದೆ.
ಸಾಲದ ಹಣ ಹಾಗೂ ಬಡ್ಡಿ ಸೇರಿ ₹67 ಲಕ್ಷ ನೀಡುವಂತೆ ಹನುಮಂತ ಅವರು ಕೇಳಿದ್ದರಿಂದ ಶಿವಾನಂದ ಅಸಮಾಧಾನಗೊಂಡು ಕೊಲೆಗೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ಸಿಮ್ನಿಂದ ಪೊಲೀಸರಿಗೆ ಸುಳಿವು: ಆರೋಪಿಗಳು ಸಿಸಿಟಿವಿ ಕ್ಯಾಮೆರಾದಲ್ಲಿದ್ದ ಸಿಮ್ ಕಾರ್ಡ್ ಕದ್ದು, ಅದನ್ನು ಬಳಸಿ ಹನುಮಂತ ಅವರಿಗೆ ಕರೆ ಹಾಗೂ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ. “ಈ ಬಾರಿ ತಪ್ಪಿಸಿಕೊಂಡಿದ್ದೀಯಾ, ಮುಂದಿನ ಬಾರಿ ತಪ್ಪಿಸಿಕೊಳ್ಳಲು ಆಗಲ್ಲ” ಎಂಬ ಸಂದೇಶವೂ ಕಳುಹಿಸಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ.
ಈ ಸಂದೇಶ ಹಾಗೂ ಮೊಬೈಲ್–ಸಿಮ್ಗಳ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ವರು ಬಂಧನ; ಮತ್ತೋರ್ವನಿಗಾಗಿ ಶೋಧ
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ಶಿವಾನಂದ ಪರಸಪ್ಪ ಜಲ್ಲಿ (29), ರೇವಣಪ್ಪ ನಿಂಗಪ್ಪ ಜಲ್ಲಿ (24), ಮಾದೇವ ಬೀರಪ್ಪ ಸಂಗಾಪುರ (21) ಹಾಗೂ ಬಬಲೇಶ್ವರದ ಮಲ್ಲಿಕಾರ್ಜುನ ಮುದಿಯಪ್ಪ ಭದ್ರಪ್ಪನವರ್ (23) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತೋರ್ವ ಆರೋಪಿ ಗಜಾನನಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಜಿಲೆಟಿನ್ ಕಡ್ಡಿಗಳನ್ನು ಒದಗಿಸಿದ ವ್ಯಾಪಾರಸ್ಥರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಬಾಗಲಕೋಟೆ ಪೊಲೀಸರು ಪ್ರಕರಣವನ್ನು ಭೇದಿಸುವ ಮೂಲಕ ಕಾರು ಸ್ಫೋಟದ ಹಿಂದಿನ ನಿಜವಾದ ಕಾರಣವನ್ನು ಪತ್ತೆಹಚ್ಚಿದ್ದು, ಸಾರ್ವಜನಿಕರಲ್ಲಿ ಮೂಡಿದ್ದ ಹಲವು ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
