Karnataka Voice

Latest Kannada News

ನಮ್ಮೂರ ಉಸಿರು ನಮಗೆ ಮುಖ್ಯ: ಕಸದ ಘಟಕದ ವಿರುದ್ಧ ಶಿವಳ್ಳಿಯ ಒಗ್ಗಟ್ಟಿನ ಘರ್ಜನೆ- ಕಾಮಗಾರಿ ಬಂದ್!

Spread the love

ಶಿವಳ್ಳಿ ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಪಾಲಿಕೆ: ಕಸ ವಿಲೇವಾರಿ ಘಟಕದ ಕಾಮಗಾರಿ ಸಂಪೂರ್ಣ ಬಂದ್

ಧಾರವಾಡ: “ಹಳ್ಳಿಗಳು ದೇಶದ ಜೀವಾಳ” ಎಂಬ ಉಕ್ತಿ ಕೇವಲ ಭಾಷಣಕ್ಕೆ ಸೀಮಿತವಲ್ಲ ಎಂಬುದನ್ನು ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮಸ್ಥರು ಸಾಬೀತುಪಡಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಗ್ರಾಮದ ಸಮೀಪದ ಮಡ್ಡಿ ಗುಡ್ಡದಲ್ಲಿ ಹಮ್ಮಿಕೊಂಡಿದ್ದ ಘನತ್ಯಾಜ್ಯ ಹಾಗೂ ಬಯೋ ಗ್ಯಾಸ್ ಘಟಕದ ಕಾಮಗಾರಿಯನ್ನು ಸಾರ್ವಜನಿಕರು ಒಗ್ಗಟ್ಟಿನಿಂದ ಹೋರಾಡಿ ಸಂಪೂರ್ಣವಾಗಿ ಬಂದ್ ಮಾಡಿಸಿದ್ದಾರೆ.

​ಯೋಜನೆಯಿಂದ ಗ್ರಾಮದ ಒಟ್ಟಾರೆ ಪರಿಸರ ಮತ್ತು ಸಾರ್ವಜನಿಕರ ಆರೋಗ್ಯ ಹಾಳಾಗುತ್ತದೆ ಎಂದು ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಮೊದಲು ಶಿವಳ್ಳಿ ಬಸ್ ನಿಲ್ದಾಣದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ನೇರವಾಗಿ ಕಾಮಗಾರಿ ನಡೆಯುತ್ತಿದ್ದ ಮಡ್ಡಿ ಗುಡ್ಡಕ್ಕೆ ಮುತ್ತಿಗೆ ಹಾಕಿ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೆಸಿಬಿ ಹಾಗೂ ಟಿಪ್ಪರ್‌ಗಳನ್ನು ಗ್ರಾಮದ ಗಡಿಯಿಂದ ಹೊರಗಟ್ಟುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

​”ನಗರದ ಕಸವನ್ನು ತಂದು ಹಳ್ಳಿಯ ಮಡಿಲಿಗೆ ಸುರಿಯುವ ಪಾಲಿಕೆಯ ಧೋರಣೆ ಖಂಡನೀಯ. ಗ್ರಾಮೀಣ ಪ್ರದೇಶದ ಶುದ್ಧ ಹವಾಮಾನವನ್ನು ವಿಷಪೂರಿತಗೊಳಿಸುವ ಇಂತಹ ಜನವಿರೋಧಿ ಯೋಜನೆಗಳಿಗೆ ನಮ್ಮ ಧಿಕ್ಕಾರವಿದೆ. ಯಾವುದೇ ಕಾರಣಕ್ಕೂ ಇಲ್ಲಿ ಕಸ ಹಾಕಲು ಬಿಡುವುದಿಲ್ಲ” ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

​ನಗರದ ಕಸ ವಿಲೇವಾರಿಗೆ ಗ್ರಾಮೀಣ ಭಾಗವನ್ನು ಬಲಿಪಶು ಮಾಡುತ್ತಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಶಿವಳ್ಳಿ ಗ್ರಾಮಸ್ಥರ ಈ ಸ್ವಾಭಿಮಾನದ ಹೋರಾಟ ಒಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.


Spread the love

Leave a Reply

Your email address will not be published. Required fields are marked *