ಹುಬ್ಬಳ್ಳಿ: ಮಾಲಿನ್ಯಗೊಂಡ ಸಮಾಜದ ಕ್ರೌರ್ಯಕ್ಕೆ “14ವರ್ಷದ ಹೆಣ್ಣು ಮಗು ತಾಯಿಯಾಗಿ ನರಳಾಟ”… ಆಘಾತಕಾರಿ ಘಟನೆ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಡೀ ಸಮಾಜವೇ ತಲೆತಗ್ಗಿಸುವಂತಹ, ಅತ್ಯಂತ ಆಘಾತಕಾರಿ ಹಾಗೂ ಕರುಳು ಹಿಂಡುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ! ಕೇವಲ 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಆಸ್ಪತ್ರೆಯ ಹಾಸಿಗೆಯ ಮೇಲೆ ಬದುಕಿಗಾಗಿ ಹೋರಾಡುತ್ತಿದ್ದಾಳೆ.
ಹರೆಯದ ಆಟ-ಪಾಠಗಳ ವಯಸ್ಸಿನಲ್ಲಿ, ಇನ್ನೂ ಸರಿಯಾದ ತಿಳುವಳಿಕೆಯೂ ಇಲ್ಲದ ಈ ಅಪ್ರಾಪ್ತ ಬಾಲಕಿಗೆ ಜುಲೈ 8 ರಂದು ಮನೆಯಲ್ಲಿಯೇ ಹೆರಿಗೆಯಾಗಿದೆ! ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಬಾಲಕಿಯನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ (ಕೆಎಂಸಿ-ಆರ್ಐ) ಆಸ್ಪತ್ರೆಗೆ ತರಲಾಗಿದೆ. ಬಾಲಕಿಯ ವಯಸ್ಸು ತೀರಾ ಚಿಕ್ಕದಾಗಿರುವುದರಿಂದ ಹಾಗೂ ಪ್ರಕರಣ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಆಕೆಯನ್ನು ಸದ್ಯ ‘ನಿರ್ಭಯಾ ವಾರ್ಡ್’ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಹೆರಿಗೆಯಾದ ನವಜಾತ ಶಿಶುವಿನ ಸ್ಥಿತಿಯೂ ಚಿಂತಾಜನಕವಾಗಿದ್ದು, ಮಗುವನ್ನು ಕಿಮ್ಸ್ನ ಮಕ್ಕಳ ತೀವ್ರ ಚಿಕಿತ್ಸಾ ಘಟಕದಲ್ಲಿ (NICU) ಇರಿಸಿ ಪ್ರಾಣ ಉಳಿಸಲು ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸದ್ಯಕ್ಕೆ ತಾಯಿ-ಮಗು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೆಎಂಸಿ-ಆರ್ಐ ಪ್ರಭಾರ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ ತಿಳಿಸಿದ್ದಾರೆ.
“ಚಿಕಿತ್ಸೆಯೇ ನಮ್ಮ ಮೊದಲ ಆದ್ಯತೆ”
“ಈ ಘಟನೆ ಹೇಗೆ ನಡೆಯಿತು, ಇದರ ಹಿಂದಿರುವವರು ಯಾರು ಎಂಬುದು ನಂತರದ ಪ್ರಕ್ರಿಯೆ. ಸದ್ಯಕ್ಕೆ ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಹೆರಿಗೆಯಾದ ಬಾಲಕಿ ತೀವ್ರ ಮಾನಸಿಕ ಆಘಾತಕ್ಕೆ (Shock) ಒಳಗಾಗಿದ್ದಾಳೆ, ಆಕೆ ಏನನ್ನೂ ಮಾತನಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮಕ್ಕಳ ರಕ್ಷಣಾ ಘಟಕ ಹಾಗೂ ನಮ್ಮ ವೈದ್ಯಕೀಯ ಸಿಬ್ಬಂದಿ ಬಾಲಕಿಗೆ ಧೈರ್ಯ ತುಂಬುತ್ತಿದ್ದಾರೆ.”
— ಡಾ. ರಾಜಶೇಖರ ದ್ಯಾಬೇರಿ, ಪ್ರಭಾರ ಅಧೀಕ್ಷಕರು
ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಇಷ್ಟೆಲ್ಲಾ ನರಕಯಾತನೆ ಅನುಭವಿಸುತ್ತಿರುವ ಈ ಬಾಲಕಿಯ ಜೊತೆಗೆ ಸದ್ಯಕ್ಕೆ ಪಾಲಕರು ಅಥವಾ ಕುಟುಂಬದವರು ಯಾರೂ ಇಲ್ಲ! ಹೆದರಿ ಓಡಿಹೋಗಿದ್ದಾರೋ ಅಥವಾ ಈಕೆಯನ್ನು ಅನಾಥವಾಗಿ ಬಿಟ್ಟಿದ್ದಾರೋ ಎಂಬುದು ಇನ್ನೂ ನಿಗೂಢವಾಗಿದೆ.
ಬಾಲಕಿಯ ಈ ಸ್ಥಿತಿಗೆ ಕಾರಣರಾದ ಆ ಕಾಮುಕರು ಯಾರು? ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಬೇಕಿದೆ. ಮಾಲಿನ್ಯಗೊಂಡ ಸಮಾಜದ ಕ್ರೌರ್ಯಕ್ಕೆ ಸಿಲುಕಿ ನಲುಗುತ್ತಿರುವ ಬಾಲಕಿಯ ಸ್ಥಿತಿ ಕಂಡು ಇಡೀ ಧಾರವಾಡ ಜಿಲ್ಲೆಯ ಜನತೆ ಕಣ್ಣೀರು ಹಾಕುವಂತಾಗಿದೆ.
