“ತಡಸಿನಕೊಪ್ಪದ ಶೂಟ್” ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ…
ಧಾರವಾಡ: ಇಲ್ಲಿನ ಹೊರವಲಯದ ತಡಸಿನಕೊಪ್ಪ ಗ್ರಾಮದ ಬಳಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ಗಲಾಟೆ ನಡೆದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ವ್ಯಕ್ತಿಯೊಬ್ಬನಿಗೆ ಗಾಯಗೊಳಿಸಿದ ಆರೋಪದ ಮೇಲೆ ಐವರನ್ನ ಬಂಧಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದರು.
ಮೇ 26 ರಂದು ಈ ಘಟನೆ ನಡೆದಿದ್ದು, ಜಮೀನು ಖರೀದಿ ವಿಚಾರವಾಗಿ ಉಭಯ ಬಣಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿದಾಗ ಆರೋಪಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಲ್ಲದೆ, ಸ್ಥಳದಲ್ಲಿದ್ದ ವಿಠಲ್ ಎಂಬುವವರ ಕಾಲಿಗೆ ಗುಂಡು ತಗುಲಿ ತೀವ್ರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮೊದಲು ಅಂಗರಕ್ಷಕರು (ಬೌನ್ಸರ್ಸ್) ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಇತ್ತಾದರೂ, ಘಟನೆಯ ಬಳಿಕ ಪೊಲೀಸರಿಗೆ ಲಭ್ಯವಾದ ಕೆಲವು ಪ್ರಮುಖ ವಿಡಿಯೋ ತುಣುಕುಗಳ ಆಧಾರದ ಮೇಲೆ ತನಿಖೆ ನಡೆಸಿ ಐದು ಜನರನ್ನು ಬಂಧಿಸಲಾಗಿದೆ.
- ಬಂಧಿತರು: ಫಿಲೋಮಿನಾ, ಪ್ರವೀಣ್ ಸುತಾರ್, ಇಂದರಪಾಲ್, ಬೆಂಜಮಿನ್ ಮತ್ತು ವಿಶಾಲ್.
- ತಲೆಮರೆಸಿಕೊಂಡಿರುವ ಆರೋಪಿ: ಸುಂದರ್ ಪಾಲ್ (ಈತನ ಬಂಧನಕ್ಕಾಗಿ ಪೊಲೀಸರು ಪ್ರತ್ಯೇಕ ತಂಡ ರಚಿಸಿ ಜಾಲ ಬೀಸಿದ್ದಾರೆ).
ಪ್ರವೀಣ್ ಎಂಬುವವರು ಈ ಜಮೀನನ್ನು ಖರೀದಿ ಮಾಡಿದ್ದರು ಎಂದು ಹೇಳಲಾಗುತ್ತಿದೆಯಾದರೂ, ಸದ್ಯ ಲಭ್ಯವಿರುವ ಅಧಿಕೃತ ದಾಖಲೆಗಳು ಬೇರೆಯೇ ಕಥೆ ಹೇಳುತ್ತಿವೆ ಎನ್ನಲಾಗಿದೆ. ಗಾಯಾಳು ವಿಠಲ್ ಜಮೀನಿನ ಅಸಲಿ ಮಾಲೀಕರ ಸಂಬಂಧಿಯಾಗಿದ್ದು, ಘಟನಾ ಸ್ಥಳದಲ್ಲಿದ್ದಾಗ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಸದ್ಯ ಆರೋಪಿಗಳ ವಿರುದ್ಧ ಕೊಲೆ ಯತ್ನ ಹಾಗೂ ಎಸ್ಸಿ-ಎಸ್ಟಿ (ಅಟ್ರಾಸಿಟಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
“ಬಂಧಿತ ಆರೋಪಿಗಳ ಮೇಲೆ ಈಗಾಗಲೇ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ತಲೆಮರೆಸಿಕೊಂಡಿರುವ ಸುಂದರ್ ಪಾಲ್ ಮೇಲೆಯೂ ಹಳೇ ಕೇಸ್ಗಳಿದ್ದು, ಈತನ ಗನ್ ಲೈಸೆನ್ಸ್ ರದ್ದಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮತ್ತೊಬ್ಬ ಆರೋಪಿ ಪ್ರವೀಣ್ ಬಳಿ ಗನ್ ಲೈಸೆನ್ಸ್ ಇರುವುದು ದೃಢಪಟ್ಟಿದೆ.”
ಕಾರ್ಯಾಚರಣೆ ವೇಳೆ ಪೊಲೀಸರು ಆರೋಪಿಗಳಿಂದ ಒಂದು ಪಿಸ್ತೂಲ್, ಒಂದು ರಿವಾಲ್ವರ್ ಹಾಗೂ ಕೃತ್ಯಕ್ಕೆ ಬಳಸಲಾದ ಒಂದು ಫಾರ್ಚೂನರ್ ಕಾರ್ ಅನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
