ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಟೀಂನಿಂದ “ಗೋವಾದಲ್ಲಿ ಆಪರೇಷನ್”- 16 ವರ್ಷ ಸಿಗದವ “ಅರೆಸ್ಟ್”…
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಗೋವಾದಲ್ಲಿ ಬಂಧನ: ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆ
ಧಾರವಾಡ: ಲಾರಿ ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಸರಕುಗಳ ಸಮೇತ ನಂಬಿಕೆ ದ್ರೋಹ ಎಸಗಿ, ಕಳೆದ ೧೬ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ಚಾಣಾಕ್ಷತನದಿಂದ ಗೋವಾದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡ ಜಿಲ್ಲೆಯ ಕಮಲಾಪುರದ ನಿವಾಸಿ ಮಾರುತಿ ಭೀಮಕ್ಕನವರ ಮಗ ಲೋಕೇಶ ಬಂಧಿತ ಆರೋಪಿಯಾಗಿದ್ದಾನೆ.
ಜೂನ್ 7, 2010 ರಂದು ಆರೋಪಿ ಲೋಕೇಶ, ಶ್ರೀರಾಮ್ ಫೈನಾನ್ಸ್ನಿಂದ ಸೀಜ್ ಆಗಿ ನಿಂತಿದ್ದ ಲಾರಿಯೊಂದರ ನಂಬರ್ ಪ್ಲೇಟ್ (KA-25 B-8638) ಅನ್ನು ತನ್ನ ಲಾರಿಗೆ ಅಳವಡಿಸಿಕೊಂಡಿದ್ದ. ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಾರ್ಗೋ ಕ್ಯಾರಿಯರ್ ಟ್ರಾನ್ಸ್ಪೋರ್ಟ್ ಕಂಪನಿಯ ಮ್ಯಾನೇಜರ್ನನ್ನು ನಂಬಿಸಿದ್ದ. ಹಿಂದೂಸ್ತಾನ್ ಲಿವರ್ ಕಂಪನಿಯಿಂದ ಹೊಸಪೇಟೆ ಹಾಗೂ ಕೊಪ್ಪಳಕ್ಕೆ ಸಾಗಿಸಬೇಕಿದ್ದ ₹1487289 ಮೌಲ್ಯದ ಸೋಪು, ಪೌಡರ್, ಶ್ಯಾಂಪೂ ಮುಂತಾದ ಸಾಮಗ್ರಿಗಳನ್ನು ಲಾರಿಯಲ್ಲಿ ತುಂಬಿಕೊಂಡು ಹೋಗಿ, ಬೇರೆಡೆ ಮಾರಾಟ ಮಾಡಲು ಯತ್ನಿಸಿ ನಂಬಿಕೆ ದ್ರೋಹ ಎಸಗಿದ್ದ. ಈ ಸಂಬಂಧ ಜೂನ್ 11, 2010 ರಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಆರೋಪಿ, ನಂತರ ನಿಗದಿತ ಮುದ್ದತ್ತಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದರಿಂದಾಗಿ ಗೌರವಾನ್ವಿತ ನ್ಯಾಯಾಲಯವು ಇದನ್ನು ‘ಲಾಂಗ್ ಪೆಂಡಿಂಗ್’ (LPC) ಪ್ರಕರಣ ಎಂದು ಪರಿಗಣಿಸಿ, ಆರೋಪಿಯ ವಿರುದ್ಧ ಓಪನ್ ವಾರಂಟ್ ಹೊರಡಿಸಿತ್ತು.
ಕಳೆದ 16 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಆರೋಪಿ ಲೋಕೇಶ, ತನ್ನ ಕುಟುಂಬದವರಿಗೂ ತನ್ನ ಸುಳಿವು ನೀಡುತ್ತಿರಲಿಲ್ಲ. ಸಿಕ್ಕಿಬೀಳಬಾರದೆಂಬ ಕಾರಣಕ್ಕೆ ತನ್ನ ಹೆಸರಿನಲ್ಲಿ ಯಾವುದೇ ಸಿಮ್ ಕಾರ್ಡ್ ಪಡೆಯದೆ, ಬೇರೆ ಬೇರೆ ಜನರ ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದ.
ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಂ.ಆರ್. ಚನ್ನಣ್ಣವರ ನೇತೃತ್ವದಲ್ಲಿ ಎಎಸ್ಐ ಎಲ್.ಎ. ಪಾತಕ ಹಾಗೂ ಎಸ್.ಎ. ಹುಡೇದ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ಸಿಬ್ಬಂದಿ ವಿಠಲ ಡಂಗನವರ ಸಹಾಯದಿಂದ ಆರೋಪಿ ಬಳಸುತ್ತಿದ್ದ ವಿವಿಧ ಮೊಬೈಲ್ ಸಂಖ್ಯೆಗಳನ್ನು ಪತ್ತೆಹಚ್ಚಿದ ಪೊಲೀಸರು, ಆತ ಬೇರೆ ಬೇರೆ ರಾಜ್ಯಗಳಲ್ಲಿ ಅಡಗಿರುವುದನ್ನು ಖಚಿತಪಡಿಸಿಕೊಂಡರು. ಕಳೆದ ಒಂದು ತಿಂಗಳಿನಿಂದ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಗೋವಾ ರಾಜ್ಯಗಳಲ್ಲಿ ಬೀಡು ಬಿಟ್ಟಿದ್ದ ಪೊಲೀಸ್ ತಂಡ, ಅಂತಿಮವಾಗಿ ಮೇ 14, 2026 ರಂದು ಗೋವಾದಲ್ಲಿ ಆರೋಪಿಯನ್ನು ಯಶಸ್ವಿಯಾದ ಜಾಲ ಬೀಸಿ ಬಂಧಿಸಿದೆ.
16 ವರ್ಷಗಳ ಹಳೇ ಪ್ರಕರಣವನ್ನು ಭೇದಿಸಿದ ಪೊಲೀಸ್ ಇನ್ಸ್ಪೆಕ್ಟರ್ ಎಂ.ಆರ್. ಚೆನ್ನಣ್ಣನವರ ಹಾಗೂ ಅವರ ಇಡೀ ತಂಡದ ಶ್ಲಾಘನೀಯ ಕಾರ್ಯವನ್ನು ಮೆಚ್ಚಿ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಅವರು ಬಹುಮಾನ ಘೋಷಿಸಿದ್ದಾರೆ.
