ಹುಬ್ಬಳ್ಳಿ: ಗಡ್ಡ ಬಿಟ್ಟ ದಲಿತರನ್ನ ಮುಸ್ಲಿಂರು ಎಂದುಕೊಂಡು ಥಳಿತ… ಮೂವರು ಆಸ್ಪತ್ರೆಗೆ ದಾಖಲು…
ಹುಬ್ಬಳ್ಳಿ: ನಗರದ ಕಮರಿಪೇಟೆಯ ತುಮಕೂರು ಓಣಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, 50-60 ಜನರ ಗುಂಪೊಂದು ಯುವಕ ಹಾಗೂ ಆತನ ಕುಟುಂಬದವರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಡಾನ್ಸ್ ಕ್ಲಾಸ್ನಲ್ಲಿ ಬಾಲಕಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ತಿಲಕ್ ಎಂಬ ಯುವಕನಿಗೆ ಗುಂಪೊಂದು ಥಳಿಸಿದೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಿಲಕ್ ಕುಟುಂಬಸ್ಥರು ಮತ್ತು ಮತ್ತೊಂದು ಗುಂಪಿನ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ವಾಗ್ವಾದ ತಾರಕಕ್ಕೆ ಏರುತ್ತಿದ್ದಂತೆ, ಸುಮಾರು 50 ರಿಂದ 60 ಜನರಿದ್ದ ಗುಂಪು ತಿಲಕ್ ಸೇರಿದಂತೆ ಆತನ ಕುಟುಂಬದವರ ಮೇಲೆಯೂ ಹಲ್ಲೆ ನಡೆಸಿದೆ.
ಈ ದಾಳಿಯಲ್ಲಿ ಪರಶುರಾಮ್ ನಾದಿಯಾಡ, ದೀಲಿಪ್ ನಾದಿಯಾಡ ಮತ್ತು ತಿಲಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. “ಅನ್ಯಕೋಮಿನವರು ಎಂಬ ಕಾರಣಕ್ಕೆ ಮೊದಲು ಹಲ್ಲೆ ನಡೆಸಿ, ನಂತರ ಜಾತಿ ನಿಂದನೆ ಮಾಡಿದ್ದಾರೆ” ಎಂದು ಸಂತ್ರಸ್ತರು ಗಂಭೀರವಾಗಿ ಆರೋಪಿಸಿದ್ದಾರೆ.
ಪ್ರಸ್ತುತ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ತನಿಖೆ ಕೈಗೊಂಡಿದ್ದಾರೆ.
