”ಬೇಲಿಯೇ ಎದ್ದು ಹೊಲ ಮೇಯ್ದಂತೆ: ಧಾರವಾಡ ಜೈಲಿಗೆ ತಂಬಾಕು, ಸಿಗರೇಟ್ ಪೂರೈಸುತ್ತಿದ್ದ ವಾರ್ಡರ್ಗಳೇ ಅರೆಸ್ಟ್!”
ಧಾರವಾಡ: ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಅಕ್ರಮವಾಗಿ ನಿಷೇಧಿತ ವಸ್ತುಗಳನ್ನು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಜೈಲು ವಾರ್ಡರ್ಗಳು ಹಾಗೂ ಒಬ್ಬ ಆಟೋ ಚಾಲಕನನ್ನು ಬಂಧಿಸಿ, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದರು.
ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕಿ ನಿರ್ಮಲಾ ಅವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಕಾರಾಗೃಹದ ಒಳಗೆ ನಿಷೇಧಿತ ವಸ್ತುಗಳನ್ನು ತಲುಪಿಸಲು ಸಂಚು ರೂಪಿಸಿದ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಬಂಧಿತ ಆರೋಪಿಗಳ ವಿವರ
- ಅಲ್ತಾಫ್ ದಾವಲ್ಸಾಬ್ ಶೇಖ್ಸನದಿ: ಜೈಲ್ ವಾರ್ಡರ್ (ನಿವಾಸಿ: ಮೆಹಬೂಬ ನಗರ, ಧಾರವಾಡ)
- ರಾಜು ಬಸಗೌಡ ಸೊಲಬಣ್ಣವರ: ಜೈಲ್ ವಾರ್ಡರ್ (ನಿವಾಸಿ: ಜೈಲ್ ಕ್ವಾರ್ಟರ್ಸ್, ಹೊಸ ಬಸ್ ನಿಲ್ದಾಣದ ಹತ್ತಿರ)
- ಮುನೀರ್ ಅಹ್ಮದ್ ಅಬ್ದುದ್ದೀನ್ ಬೆಟಗೇರಿ: ಆಟೋ ಚಾಲಕ (ನಿವಾಸಿ: ಮೆಹಬೂಬ ನಗರ, ಧಾರವಾಡ)
ಆರೋಪಿಗಳಿಂದ ಸುಮಾರು 75,000 ರೂ. ಮೌಲ್ಯದ ಕೆಳಕಂಡ ನಿಷೇಧಿತ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ:
- ಮಂಗಲ್ ತಂಬಾಕು, ಸಿಗರೇಟ್ ಮತ್ತು ಆರ್ಎಮ್ಡಿ (RMD) ಪಾರ್ಸೆಲ್ಗಳು.
- ವಿಮಲ್ ಪ್ಯಾಕೆಟ್ಗಳು ಹಾಗೂ ಕನೆಕ್ಟಿಂಗ್ ಲೈಟ್ಸ್.
ಕರ್ನಾಟಕ ಬಂಧಿಖಾನೆ ತಿದ್ದುಪಡಿ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಉಪನಗರ ಠಾಣೆಯ ಪೊಲೀಸರು, ಬಂಧಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜೈಲಿನ ಸಿಬ್ಬಂದಿಯೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಗಂಭೀರ ವಿಚಾರವಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಕಮೀಷನರ್ ಮಾಹಿತಿ ನೀಡಿದರು.
