ಧಾರವಾಡ: ಜಾತಿ ಮೀರಿದ ಜೋಗುಳ: ಮೃತ ಗೋವುಗಳಿಗೆ ಮುಸ್ಲಿಂ ಯುವಕನಿಂದ ಅಂತ್ಯಸಂಸ್ಕಾರ…
ಜಾತಿ ಮೀರಿದ ಮಾನವೀಯತೆ: ಮೃತ ಗೋವುಗಳಿಗೆ ಮುಸ್ಲಿಂ ಯುವಕನಿಂದ ಅಂತ್ಯಸಂಸ್ಕಾರ
ಧಾರವಾಡ: ಇಂದಿನ ಕೋಮು ಸಂಘರ್ಷಗಳ ನಡುವೆ ಧಾರವಾಡದ ಯುವಕನೊಬ್ಬ ಜಾತಿ-ಮತಗಳಿಗಿಂತ ಮಾನವೀಯತೆಯೇ ದೊಡ್ಡದು ಎಂದು ಸಾರುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಧಾರವಾಡ ಉಪ್ಪಿನಬೆಟಗೇರಿ ರಸ್ತೆಯ ಬದಿಯಲ್ಲಿ ನಾಲ್ಕು ಆಕಳುಗಳು ಮೃತಪಟ್ಟು, ಅವುಗಳ ಕಳೇಬರಗಳು ಕೊಳೆಯುತ್ತಾ ಬಿದ್ದಿದ್ದವು. ಇದರಿಂದ ಆ ಭಾಗದಲ್ಲಿ ಅತೀವ ದುರ್ನಾತ ಹರಡಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿತ್ತು.
ಇದನ್ನು ಗಮನಿಸಿದ ಸ್ಥಳೀಯ ಯುವಕ ಜುಬೇರ್ ಬಿಸ್ತಿ, ಯಾರನ್ನೂ ಕಾಯದೆ ಸ್ವಯಂಪ್ರೇರಿತರಾಗಿ ಜೆಸಿಬಿ ತರಿಸಿ, ಗುಂಡಿ ತೆಗೆದು ಆ ನಾಲ್ಕೂ ಗೋವುಗಳನ್ನು ಮಣ್ಣು ಮಾಡುವ ಮೂಲಕ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
”ಧರ್ಮ ಯಾವುದಾದರೇನು, ಜೀವ ಹೋದ ಮೇಲೆ ಪ್ರಾಣಿಗಳಿಗೂ ಗೌರವ ನೀಡಬೇಕು” ಎನ್ನುವ ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜುಬೇರ್ ಅವರ ಈ ನಿಸ್ವಾರ್ಥ ಸೇವೆ ಸಮಾಜದಲ್ಲಿ ಸೌಹಾರ್ದತೆಯ ಬೆಳಕು ಚೆಲ್ಲಿದೆ.
