ಹೆಣ್ಣು-ಹೊನ್ನು ಮತ್ತೂ ಮಣ್ಣಾದ ಮಾಜಿ ಶಾಸಕರ ಪುತ್ರ- ಕೆಲವೇ ಗಂಟೆಯಲ್ಲಿ ಸ್ಪೋಟಕ ಮಾಹಿತಿ ಬಿಚ್ಚಡಲಿದ್ದಾರೆ ಧಾರವಾಡ SP ಗುಂಜನ ಆರ್ಯ…!
ಧಾರವಾಡ: “ಹೆಣ್ಣು, ಹೊನ್ನು, ಮಣ್ಣು” ಮನುಷ್ಯನ ವಿನಾಶಕ್ಕೆ ಕಾರಣವಾಗುತ್ತವೆ ಎಂಬ ಮಾತು ಅಕ್ಷರಶಃ ನಿಜವಾದಂತಿದೆ. ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ನಿರ್ಜನ ಪ್ರದೇಶದಲ್ಲಿ ನಡೆದ ಭೀಕರ ಕೃತ್ಯವೊಂದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದು, ಬೈಲಹೊಂಗಲದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರನ್ನು ಕಾರಿನ ಸಮೇತ ಸುಟ್ಟು ಹಾಕಿರುವ ಘಟನೆಯ ನಿಖರವಾದ ಮಾಹಿತಿಯನ್ನ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಅವರು ಬಿಚ್ಚಿಡಲಿದ್ದಾರೆ.
ರಾಮಾಪುರ ರೈಲ್ವೆ ಟ್ರ್ಯಾಕ್ ಪಕ್ಕದ ದಟ್ಟ ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ಕಾರಿನಲ್ಲಿ ರಾಜು ಬೋಳಶೆಟ್ಟಿ ಅವರ ಮೃತದೇಹ ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಮೊದಲೇ ಸಂಚು ರೂಪಿಸಿ, ಅವರನ್ನು ಇಲ್ಲಿಗೆ ಕರೆತಂದು ಹತ್ಯೆಗೈದ ಬಳಿಕ, ಸಾಕ್ಷ್ಯ ನಾಶಪಡಿಸಲು ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಈ ಕೊಲೆಯ ಹಿಂದೆ ಹಣಕಾಸಿನ ವ್ಯವಹಾರ (ಹೊನ್ನು) ಹಾಗೂ ಒಬ್ಬ ಮಹಿಳೆಯ ನಂಟು (ಹೆಣ್ಣು) ಇರುವ ಸಾಧ್ಯತೆ ದಟ್ಟವಾಗಿದೆ. ಆರ್ಥಿಕದ ಜೊತೆಗೆ ಕೊಡು-ಕೊಳ್ಳುವಿಕೆಯ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯವೇ ಈ ಕೃತ್ಯಕ್ಕೆ ಪ್ರಚೋದನೆ ನೀಡಿರಬಹುದು ಎನ್ನಲಾಗುತ್ತಿದೆ. ಮಹಿಳೆಯೊಬ್ಬಳ ಮೂಲಕವೇ ಈ ಹತ್ಯೆಯ ಸಂಚು ರೂಪಿಸಲಾಗಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
