ಗೆಳೆತನದ ಹಾದಿಯಲ್ಲೇ ಕೊನೆಯುಸಿರು: ಲಕಮಾಪುರದ ಇಬ್ಬರು ಯುವಕರನ್ನು ಬಲಿ ಪಡೆದ “ಹಿಟ್ ಅಂಡ್ ರನ್ ಕೇಸ್”
ಧಾರವಾಡ: ರಮಜಾನ್ ಹಬ್ಬದ ಸಡಗರದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯಾಟ ಬೇರೆಯೇ ಆಗಿತ್ತು. ಚಾಂದ್ ಸಲಾಮ್ ಮುಗಿಸಿ ಮರಳುತ್ತಿದ್ದ ಯುವಕರ ಬೈಕಿಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ, ಇಬ್ಬರು ಯುವಕರು ಮೃತಪಟ್ಟ ಘಟನೆ ಕೆಲಗೇರಿ ಸೇತುವೆ ಬಳಿ ನಡೆದಿದೆ.
ಲಕಮಾಪುರ ಗ್ರಾಮದ ಇಮಾಮಸಾಬ ಹೆಬ್ಬಳ್ಳಿ ಹಾಗೂ ಆತನ ಗೆಳೆಯ ಮೊಹ್ಮದಯೂನುಸ್ ಮುಲ್ಲಾನವರ ಮೃತ ದುರ್ದೈವಿಗಳು. ಇಮಾಮಸಾಬ ತನ್ನ ಅಣ್ಣನ ಮದುವೆ ನಿಶ್ಚಯವಾಗಿದ್ದ ಕಂಬಾರಗಣವಿಯ ಮನೆಗೆ ಹಬ್ಬದ ನಿಮಿತ್ತ ‘ಚಾಂದ್ ಸಲಾಮ್’ ನೀಡಲು ಗೆಳೆಯನೊಂದಿಗೆ ತೆರಳಿದ್ದನು. ಕೆಲಸ ಮುಗಿಸಿ ಮರಳಿ ಬರುವಾಗ ಅಪರಿಚಿತ ವಾಹನವೊಂದು ಇವರ ಬೈಕಿಗೆ ಜೋರಾಗಿ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಅಪಘಾತದ ತೀವ್ರತೆಗೆ ಇಮಾಮಸಾಬ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಮೊಹ್ಮದಯೂನುಸ್ನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಕೂಡ ಇಂದು ಕೊನೆಯುಸಿರೆಳೆದಿದ್ದಾನೆ.
ಹಬ್ಬದ ದಿನವೇ ಇಬ್ಬರು ಯುವಕರನ್ನು ಕಳೆದುಕೊಂಡ ಲಕಮಾಪುರ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಈ ಕುರಿತು ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತವೆಸಗಿ ಪರಾರಿಯಾಗಿರುವ ವಾಹನ ಮತ್ತು ಚಾಲಕನ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
