ಆಸ್ತಿಗಾಗಿ “ಕಡಿದು” ಹೋದ ಅಣ್ಣ-ತಂಗಿ ಸಂಬಂಧ: ಯುಗಾದಿಯಂದೇ ಅಮ್ಮಿನಬಾವಿಯಲ್ಲಿ ರಕ್ತದ ಯುಗಾದಿ!
ಆಸ್ತಿಗಾಗಿ ರಕ್ತ ಸಂಬಂಧ ಬಲಿ: ಅಣ್ಣನಿಂದಲೇ ತಂಗಿಯ ಬರ್ಬರ ಹತ್ಯೆ
ಧಾರವಾಡ: ಯುಗಾದಿ ಹಬ್ಬದ ಸಂಭ್ರಮದ ನಡುವೆಯೇ ಜಿಲ್ಲೆಯ ಅಮ್ಮಿನಬಾವಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತನ್ನ ಸ್ವಂತ ತಂಗಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ.
ಶಿವಲೀಲಾ ಸಂಗೊಳ್ಳಿ (35) ಕೊಲೆಯಾದ ದುರ್ದೈವಿ. ಈಕೆಯ ಸೋದರ ಹಣಮಂತ ಯಲಿವಾಳ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಯಲ್ಲಿವಾಳ ಕುಟುಂಬಕ್ಕೆ ಸೇರಿದ ಆರು ಎಕರೆ ಜಮೀನಿನ ವಿಷಯವಾಗಿ ಅಣ್ಣ-ತಂಗಿ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ವಾಗ್ವಾದ ನಡೆಯುತ್ತಿತ್ತು. ಯುಗಾದಿ ಪಾಡ್ಯದಂದು ಭೂಮಿ ಪೂಜೆ ಮಾಡಲು ಇಬ್ಬರೂ ಜಮೀನಿಗೆ ತೆರಳಿದ್ದರು. ಈ ವೇಳೆ ಶಿವಲೀಲಾ ಅವರು ತಮಗೆ ಬರಬೇಕಾದ ಪಾಲಿನ ಜಮೀನಿನಲ್ಲಿ ಪೂಜೆ ಮಾಡುವುದಾಗಿ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ಜಮೀನಿನ ಪಾಲು ನೀಡುವ ವಿಚಾರದಲ್ಲಿ ಇಬ್ಬರ ನಡುವೆ ಹೊಲದಲ್ಲೇ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಹಣಮಂತ, ತಂಗಿ ಶಿವಲೀಲಾ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಶಿವಲೀಲಾ ಅವರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಬ್ಬದ ದಿನವೇ ನಡೆದ ಈ ರಕ್ತಪಾತ ಅಮ್ಮಿನಬಾವಿ ಗ್ರಾಮಸ್ಥರನ್ನು ದಿಗ್ಭ್ರಮೆಗೊಳಿಸಿದೆ.
