ಕಪ್ಪು ಬಣ್ಣದ ಥಾರ್ ಕಾರಿನ ರಹಸ್ಯ ಬಯಲು: ಆಸ್ತಿಗಾಗಿ “ಮೊದಲ” ಹೆಂಡತಿ ಹತ್ಯೆಗೆ 40ಲಕ್ಷಕ್ಕೆ ಸುಪಾರಿ.. ಪತಿ ಆ್ಯಂಡ್ ಗ್ಯಾಂಗ್ ಅರೆಸ್ಟ್!
ಧಾರವಾಡ: ನಗರದ ಸವದತ್ತಿ ರಸ್ತೆಯ ಅಮ್ಮಿನಭಾವಿ ಬಳಿ ಫೆಬ್ರವರಿ 26 ರಂದು ನಡೆದಿದ್ದ ಮಹಿಳೆಯ ಸಾವು ಕೇವಲ ಅಪಘಾತವಲ್ಲ, ಅದೊಂದು ವ್ಯವಸ್ಥಿತವಾಗಿ ನಡೆದ ಸುಪಾರಿ ಕೊಲೆ ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬಯಲಾಗಿದೆ. ಆಸ್ತಿ ವಿಚಾರಕ್ಕಾಗಿ ಸ್ವಂತ ಪತ್ನಿಯನ್ನೇ ಕೊಲ್ಲಲು 40 ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಪತಿ ಉದಯಕುಮಾರ ಹಾಗೂ ಆತನ ಸಹಚರರನ್ನು ಧಾರವಾಡ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 26 ರಂದು ಬೆಳಿಗ್ಗೆ 11:50 ರ ಸುಮಾರಿಗೆ ಅಮ್ಮಿನಭಾವಿ ಗ್ರಾಮದ ದುರ್ಗಾದೇವಿ ಗುಡಿಯ ಹತ್ತಿರ ಲಲಿತಾ ಉದಯಕುಮಾರ ಹಾತರಕಿ (42) ಎಂಬುವವರಿಗೆ ಕಪ್ಪು ಬಣ್ಣದ ಥಾರ್ (THAR) ವಾಹನವೊಂದು ಡಿಕ್ಕಿ ಹೊಡೆದಿತ್ತು. ತಲೆ ಮತ್ತು ಮುಖಕ್ಕೆ ತೀವ್ರ ಗಾಯಗಳಾಗಿ ಲಲಿತಾ ಸ್ಥಳದಲ್ಲೇ ಮೃತಪಟ್ಟಿದ್ದರು. ಇದನ್ನು ಅಪಘಾತವೆಂದು ಬಿಂಬಿಸಲು ಆರೋಪಿಗಳು ಯತ್ನಿಸಿದ್ದರು. ಆದರೆ, ಮೃತಳ ತಂದೆ ನಿಂಗಪ್ಪ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಐದು ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದಾಗ ಭೀಕರ ಸಂಚು ಬಯಲಾಗಿದೆ.
ತನಿಖೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ:
ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿಗಳಾದ ಶಿವಾನಂದ ಕಟಗಿ ಮತ್ತು ವಿನೋದ ಮುಕ್ಕೇದಾರ ಅವರ ನೇತೃತ್ವದಲ್ಲಿ ಕೆಳಗಿನ ತಂಡಗಳು ಕಾರ್ಯನಿರ್ವಹಿಸಿವೆ:
- ತನಿಖಾ ತಂಡ: ಶಿವಾನಂದ. ಎಸ್. ಕಮತಗಿ (ಪಿಐ), ಎಂ. ಎಸ್. ಜೊಡಗೇರಿ, ಎ. ಬಿ. ಸೊರಟೂರ, ಮಲ್ಲಪ್ಪ ಡಾಬೋಳಿ.
- ಸಿ.ಸಿ.ಟಿ.ವಿ ತನಿಖಾ ತಂಡ: ಸಂಜುಗೌಡ ಪಾಟೀಲ, ಮಾರುತಿ ಕುಂಬಾರ, ಮಹಾಂತೇಶ ನೆಟಗಲ್, ಶ್ರೀಧರ ಗುಗ್ಗರಿ, ಕೃಷ್ಣ ವಿಭೂತಿ.
- ಟೆಕ್ನಿಕಲ್ ತಂಡ: ಅಭಿಜಿತ್ (ಪಿ.ಎಸ್.ಐ), ವಿಠಲ ಅಶೋಕ ಡಂಗನವರ, ರವೀಂದ್ರ ಪಟ್ಟೇದ.
- ಆರೋಪಿ ಪತ್ತೆ ತಂಡ: ಪ್ರವೀಣ ಕೋಟಿ (ಪಿ.ಎಸ್.ಐ), ಉಲ್ಲಾಸ ದೊಡಾಚಕರ (ಎ.ಎಸ್.ಐ), ಸಂತೋಷ ಜವಳಿ, ಸಿದ್ಧೇಶ್ವರ ಹಿರೇಮಠ, ವಿನಾಯಕ ಪಡಸಲಗಿ, ಎಂ. ಎಸ್. ಸಂಗಮ್, ಶ್ರೀ ಗುರು ಮಾಳಿ.
- ವಿಚಾರಣಾ ತಂಡ: ಹೆಚ್. ಎಂ. ನರಗುಂದ (ಎ.ಎಸ್.ಐ), ಕುಮಾರ ಕಾಂಬಳೆ, ಮಂಜುನಾಥ ಚಿಕ್ಕುಂಬಿ.
ಬಂಧಿತ ಆರೋಪಿಗಳು:
- ಉದಯಕುಮಾರ ದ್ಯಾಮಪ್ಪ ಹಾತರಕಿ (ಮೃತಳ ಪತಿ – ಸಾ: ನರೇಂದ್ರ)
- ನಾಗಪ್ಪ ಮಡಿವಾಳಪ್ಪ ಪಡೇಕರ (ಸಾ: ಗರಗ)
- ಅಭೀಷೇಕ ನಿಂಗಪ್ಪ ವರಗನ್ನವರ (ಸಾ: ನಿಚ್ಚನಕಿ)
- ನಾಗರಾಜ ಮಡಿವಾಳಪ್ಪ ಉಪ್ಪಿನ (ಸಾ: ದೊಡವಾಡ)
ಪೊಲೀಸರು ಕೃತ್ಯಕ್ಕೆ ಬಳಸಿದ ಕಪ್ಪು ಬಣ್ಣದ ಥಾರ್ ಕಾರು, ನಾಲ್ಕು ಮೊಬೈಲ್ಗಳು ಹಾಗೂ 20,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಪೊಲೀಸ್ ಇಲಾಖೆ ಶ್ಲಾಘಿಸಿದೆ.
