ಹುಬ್ಬಳ್ಳಿ: ಹನುಮಂತ ದೇವಸ್ಥಾನದ ಹುಂಡಿ ಒಡೆದು ಕಳ್ಳತನ; ಬೆಳ್ಳಿ ಕಿರೀಟವೂ ಮಾಯ!
ಹುಬ್ಬಳ್ಳಿ: ನಗರದ ಮರಾಠಾ ಗಲ್ಲಿಯಲ್ಲಿರುವ ಪುರಾತನ ಹನುಮಂತನ ದೇವಸ್ಥಾನದಲ್ಲಿ ಮಂಗಳವಾರ ತಡರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಲಾಗಿದೆ.
ಮಂಗಳವಾರ ರಾತ್ರಿ ಸುಮಾರು 11:30 ರ ಸುಮಾರಿಗೆ ದೇವಸ್ಥಾನದ ಆವರಣಕ್ಕೆ ನುಗ್ಗಿದ ಕಳ್ಳರು, ಅತ್ಯಂತ ಚಾಣಾಕ್ಷತನದಿಂದ ದೇವಸ್ಥಾನದ ಮೇಲ್ಭಾಗಕ್ಕೆ ಹತ್ತಿದ್ದಾರೆ. ಅಲ್ಲಿರುವ ಆಲದ ಮರದ ಕೊಂಬೆಗಳ ಸಹಾಯದಿಂದ ದೇವಸ್ಥಾನದ ಒಳಭಾಗಕ್ಕೆ ಇಳಿದು ಈ ಕೃತ್ಯ ಎಸಗಿದ್ದಾರೆ.
ದೇವಸ್ಥಾನದಲ್ಲಿದ್ದ ಎರಡು ಹುಂಡಿಗಳನ್ನು ಒಡೆದಿರುವ ಕಳ್ಳರು, ಅದರಲ್ಲಿದ್ದ ಅಂದಾಜು 50 ರಿಂದ 75 ಸಾವಿರ ರೂಪಾಯಿ ನಗದು ಹಣವನ್ನು ದೋಚಿದ್ದಾರೆ. ಅಷ್ಟೇ ಅಲ್ಲದೆ, ದೇವಸ್ಥಾನದಲ್ಲಿದ್ದ ಗಣಪತಿ ವಿಗ್ರಹಕ್ಕೆ ಧರಿಸಲಾಗಿದ್ದ ಸುಮಾರು 5 ತೊಲ ತೂಕದ ಬೆಳ್ಳಿಯ ಕಿರೀಟವನ್ನು ಕೂಡ ಕದ್ದೊಯ್ದಿದ್ದಾರೆ.
ಕಳ್ಳರು ದೇವಸ್ಥಾನದ ಒಳಗೆ ಓಡಾಡುತ್ತಿರುವ ಮತ್ತು ಹುಂಡಿ ಒಡೆಯುತ್ತಿರುವ ದೃಶ್ಯಗಳು ದೇವಸ್ಥಾನದ ಸಿಸಿಟಿವಿ (CC Camera) ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಇದು ಪೊಲೀಸರಿಗೆ ಪ್ರಮುಖ ಸಾಕ್ಷ್ಯವಾಗಿ ಸಿಕ್ಕಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುಸ್ತಾಕ್ ಅಹಮ್ಮದ್ ಶೇಕ್, ಕ್ರೈಂ ಸಬ್ ಇನ್ಸ್ಪೆಕ್ಟರ್ ಪ್ರಮೋದ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಸಮಿತಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರಿಗಾಗಿ ಜಾಲಬೀಸಿದ್ದಾರೆ.
