”ಧಾರವಾಡ ಡಿಸಿ “ಜನಸ್ನೇಹಿ ಸ್ನೇಹಲ್” ದಿಢೀರ್ ಫೀಲ್ಡ್ ವಿಸಿಟ್: ಕಾಲ್ನಡಿಗೆಯಲ್ಲೇ ಕಾಮಗಾರಿ ವೀಕ್ಷಿಸಿದ ಕಲೆಕ್ಟರ್!”
ಧಾರವಾಡ: ನಗರದ ಬಹುನಿರೀಕ್ಷಿತ ಹಾಗೂ ಅತ್ಯಂತ ಪ್ರಮುಖವಾದ ಹುಬ್ಬಳ್ಳಿಯ ಮೇಲ್ಸೇತುವೆ (Flyover) ಕಾಮಗಾರಿಗಳ ವಿಳಂಬಕ್ಕೆ ತೆರೆ ಎಳೆಯಲು ಮತ್ತು ಸಾರ್ವಜನಿಕರ ಸಂಚಾರ ದಟ್ಟಣೆ ನಿವಾರಿಸಲು ಸ್ವತಃ ಜಿಲ್ಲಾಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಅಖಾಡಕ್ಕಿಳಿದರು.
ಬುಧವಾರ ಮುಂಜಾನೆಯೇ ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಟ ಡಿಸಿಯವರು, ನಗರದ ಪ್ರಮುಖ ವೃತ್ತಗಳಾದ ಹೊಸೂರು ಸರ್ಕಲ್ ಹಾಗೂ ಕಿತ್ತೂರು ಚನ್ನಮ್ಮ ಸರ್ಕಲ್ಗೆ ಭೇಟಿ ನೀಡಿ ಕಾಮಗಾರಿಯ ಪ್ರಸ್ತುತ ಸ್ಥಿತಿಗತಿಗಳನ್ನು ಪರಾಮರ್ಶಿಸಿದರು.
ವಿಶೇಷವೆಂದರೆ, ಗಾಳಿ ದುರ್ಗಮ್ಮ ದೇವಸ್ಥಾನ ಹಾಗೂ ಮಹಾನಗರ ಪಾಲಿಕೆಯ ಈಜುಕೊಳದ ಬಳಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಲ್ಲಿಂದ ಕಿತ್ತೂರು ಚನ್ನಮ್ಮ ವೃತ್ತದವರೆಗೆ ಕಾಲ್ನಡಿಗೆಯ ಮೂಲಕವೇ ಸಂಚರಿಸಿದರು. ಈ ವೇಳೆ ಕಾಮಗಾರಿಯಲ್ಲಿ ಆಗುತ್ತಿರುವ ತಾಂತ್ರಿಕ ಅಡೆತಡೆಗಳು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸ್ಥಳದಲ್ಲೇ ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸಿದರು.
ಪರಿಶೀಲನೆ ವೇಳೆ ಮೇಲ್ಸೇತುವೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕಾಮಗಾರಿಯಿಂದಾಗಿ ಸಂಚಾರಕ್ಕೆ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ತಿಳಿಸಿದ ಅವರು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿಗಳ ಈ ದಿಢೀರ್ ಭೇಟಿ ಮತ್ತು ಕಾಲ್ನಡಿಗೆಯ ಪರಿಶೀಲನೆಯು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
